ವಿವಿಐಪಿ ಚಾಪರ್ ಹಗರಣ; ಇಟಲಿ ಕೋರ್ಟ್ ತೀರ್ಪಿನಿಂದ ನಮ್ಮ ಸ್ವತಂತ್ರ್ಯ ತನಿಖೆಗೆ ಅಡ್ಡಿಯಿಲ್ಲ: ಸಿಬಿಐ

ಬಹುಕೋಟಿ ವಿವಿಐಪಿ ಚಾಪರ್ ಹಗರಣ ಸಂಬಂಧ ಇಟಲಿ ಕೋರ್ಟ್ ಇಬ್ಬರು ಪ್ರಮುಖ ಆರೋಪಿಗಳನ್ನು ಖುಲಾಸೆಗೊಳಿಸಿದೆಯಾದರೂ ಇದರಿಂದ ನಮ್ಮ ತನಿಖೆಗೆ ಅಡ್ಡಿಯಿಲ್ಲ. ನಮ್ಮದು ಸ್ವತಂತ್ರ್ಯ ತನಿಖೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಹುಕೋಟಿ ವಿವಿಐಪಿ ಚಾಪರ್ ಹಗರಣ ಸಂಬಂಧ ಇಟಲಿ ಕೋರ್ಟ್ ಇಬ್ಬರು ಪ್ರಮುಖ ಆರೋಪಿಗಳನ್ನು ಖುಲಾಸೆಗೊಳಿಸಿದೆಯಾದರೂ ಇದರಿಂದ ನಮ್ಮ ತನಿಖೆಗೆ ಅಡ್ಡಿಯಿಲ್ಲ. ನಮ್ಮದು ಸ್ವತಂತ್ರ್ಯ ತನಿಖೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಕರಣದ ತನಿಖಾ ಜವಾಬ್ದಾರಿ ವಹಿಸಿರುವ ಸಿಬಿಐ ಅಧಿಕಾರಿಗಳು, ಈ ಹಿಂದೆ ಮಿಲಾನ್ ನ ಕೆಳ ಕೋರ್ಟ್ ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪುನೀಡಿತ್ತು, ಈ ಸಂಬಂಧ ತೀರ್ಪಿನ  ಪ್ರತಿ ಹಾಗೂ ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾವು ಸಂಗ್ರಹಿಸಿದ್ದೇವೆ. ಅಂತೆಯೇ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸಂಬಂಧವೂ ಮಾಹಿತಿ ಸಂಗ್ರಹ ಮಾಡಲಿದ್ದೇವೆ. ಇಟಲಿ ಕೋರ್ಟ್ ತೀರ್ಪಿಗೂ ನಮ್ಮ  ತನಿಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮದು ಸ್ವತಂತ್ರ್ಯ ತನಿಖೆಯಾಗಿದ್ದು, ತೀರ್ಪಿನಿಂದಾಗಿ ತನಿಖೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೇ ಇಟಲಿ ಕೋರ್ಟ್ ಹಗರಣದ ಪ್ರಮುಖ ಆರೋಪಿಗಳಾದ ಫಿನ್ ಮೆಕಾನಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಗಿಸೆಪ್ಪೆ ಓರ್ಸಿ ಮತ್ತು ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯ ಸಹಾಯಕ ನಿರ್ದೇಶಕ ಬ್ರುನೋ ಸ್ಪಾಗ್ನಲೋನಿ ಅವರನ್ನು  ಖುಲಾಸೆಗೊಳಿಸಿತ್ತು. ಪ್ರಕರಣ ಸಂಬಂಧ ಆರೋಪಿಗಳ ಮೇಲೆ ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಆರೋಪಗಳನ್ನು ಸಾಬೀತು ಪಡಿಸುವ ಪ್ರಬಲ ಸಾಕ್ಷ್ಯಗಳಿಲ್ಲ ಎಂದು ಹೇಳಿ  ಖುಲಾಸೆಗೊಳಿಸಿದೆ.
ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್ ಮಾರಾಟ ಸಂಬಂಧ ಫಿನ್ ಮೆಕಾನಿಕಾ ಮತ್ತು ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯ ಅಧಿಕಾರಿಗಳು ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಬಹುಕೋಟಿ ಕಿಕ್ ಬ್ಯಾಕ್ ನೀಡಿದ್ದರು ಎಂಬ ಗಂಭೀರ  ಆರೋಪವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com