ಬಿಹಾರ: ಪ್ರಸಿದ್ಧ ಧಾರ್ಮಿಕ ಕೇಂದ್ರ ಬೋಧ್ ಗಯಾದಲ್ಲಿ ನಿನ್ನೆ ರಾತ್ರಿ ಎರಡು ಬಾಂಬ್ ಪತ್ತೆಯಾಗಿದ್ದು, ಬೌಧ ಧರ್ಮಗುರು ದಲೈಲಾಮ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ ಡಿಐಜಿ ವಿನಯ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾಲಚಕ್ರ ಮೈದಾನದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವಾಗ ಸುಧಾರಿತ ಪ್ರಮಾಣದ ಎರಡು ಬಾಂಬ್ ಮಾದರಿಯ ಸ್ಪೋಟಕಗಳು ಪತ್ತೆಯಾಗಿವೆ ಎಂದು ಪಾಟ್ನಾವಲಯದ ಐಜಿಪಿ ಎನ್. ಹೆಚ್. ಖಾನ್ ಹೇಳಿದ್ದಾರೆ.
ಕಾಲಚಕ್ರ ಮೈದಾನದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಚಿಂತಕ ದಲೈಲಾಮ ಅವರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು,ಟಿಪ್ಪನ್ ಬಾಕ್ಸ್ ಮಾದರಿಯ ವಸ್ತುವಿನಲ್ಲಿ ಬಾಂಬ್ ಇಡಲಾಗಿತ್ತು,ಇದರಿಂದಾಗಿ ಭಕ್ತಾಧಿಗಳು ಕೆಲಕಾಲ ಆತಂಕಕ್ಕೊಳಗಾಗಿದ್ದರು ಎಂದು ಅವರು ಹೇಳಿದರು.
ದಲೈಲಾಮ ಅವರ ಭಾಷಣ ಮುಗಿದ ಕೂಡಲೇ ಬಾಂಬ್ ಸ್ಪೋಟಿಸುವ ಸಂಚು ಇದಾಗಿದ್ದು, ಪರಿಶೀಲನೆ ವೇಳೆ ಸುಟ್ಟು ಹೋಗಿರುವ ಧರ್ಮೋಸ್ ಪ್ಲಾಸ್ಕ್ ವೊಂದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನವರಿ 1 ರಲ್ಲೇ ದಲೈಲಾಮ ಬೋಧ್ ಗಯಾಕ್ಕೆ ಆಗಮಿಸಿದ್ದು, ಒಂದು ತಿಂಗಳ ಕಾಲ ಉಪನ್ಯಾಸ ನಡೆಸುವ ಸಾಧ್ಯತೆ ಇದೆ. ಇತ್ತೀಚಿಗೆಷ್ಟೇ ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಹಾಲಿವುಡ್ ನಟ ರಿಚರ್ಡ್ ಗೆರ್ ಸೇರಿದಂತೆ ಹಲವು ಮಂದಿ ಗಣ್ಯರು ದಲೈಲಾಮ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದರು.2013ರಲ್ಲಿ ಮಹಾಬೋದಿ ದೇವಾಲಯ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐವರು ನಾಗರಿಕರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು.
Advertisement