ದೇಶ
ಗಣರಾಜ್ಯೋತ್ಸವ: ಧ್ವಜಾರೋಹಣ ಮಾಡುವ ಗಣ್ಯರ ಕುರಿತು ಸುತ್ತೋಲೆ ಹೊರಡಿಸಿದ ಕೇರಳ ಸರ್ಕಾರ
ಗಣರಾಜ್ಯೋತ್ಸವ ದಿನದಂದು ಯಾವ ಯಾವ ಅಧಿಕಾರಿಗಳು ಧ್ವಜಾರೋಹಣ ಮಾಡಬಹುದು ಎಂಬುದಕ್ಕೆ ಕೇರಳ ರಾಜ್ಯ ಸರ್ಕಾರ ಬುಧವಾರ ಸುತ್ತೋಲೆ ಹೊರಡಿಸಿದೆ...
ತಿರುವನಂತಪುರ: ಗಣರಾಜ್ಯೋತ್ಸವ ದಿನದಂದು ಯಾವ ಯಾವ ಅಧಿಕಾರಿಗಳು ಧ್ವಜಾರೋಹಣ ಮಾಡಬಹುದು ಎಂಬುದಕ್ಕೆ ಕೇರಳ ರಾಜ್ಯ ಸರ್ಕಾರ ಬುಧವಾರ ಸುತ್ತೋಲೆ ಹೊರಡಿಸಿದೆ.
ಕೇರಳದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್'ಡಿಎಫ್) ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಗಣರಾಜ್ಯೋತ್ಸವ ದಿನದಂದು ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ ಯಾರು ಯಾರು ಧ್ವಜಾರೋಹಣ ಮಾಡಬೇಕೆಂಬ ಸೂಚನೆಗಳನ್ನು ನೀಡಿದೆ.
ಪ್ರಸ್ತುತ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ, ಜಿಲ್ಲಾಮಟ್ಟದಲ್ಲಿ ಸಚಿವರು ಧ್ವಜಾರೋಹಣ ಮಾಡಬಹುದಾಗಿದೆ.ಪಂಚಾಯತ್ ಹಾಗೂ ಪುರಸಭಾ ಪ್ರದೇಶಗಳಲ್ಲಿ ಪಂಜಾಯಿತಿ ಅಧ್ಯಕ್ಷರು, ಪುರಸಭಾಧ್ಯಕ್ಷರು ಹಾಗೂ ಮೇಯರ್ ಧ್ವಜಾರೋಹಣ ಮಾಡಬೇಕು. ಉಪ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವುದು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಗಳ ಜವಾಬ್ದಾರಿಗಿರುತ್ತದೆ ಎಂದು ತಿಳಿಸಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಾರೋಹಣ ಮಾಡಿದ್ದ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಗಣರಾಜ್ಯೋತ್ಸವ ದಿನದಂದೂ ಕೂಡ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಆ ಸಂಸ್ಥೆಯ ಮುಖ್ಯಸ್ತರು ಮಾತ್ರ ತ್ರಿವರ್ಣ ಧ್ವಜಾರೋಹಣ ಮಾಡಬೇಕೆಂದು ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದ ನಡುವೆಯೂ ಪಾಲಕ್ಕಾಡ್ ನಲ್ಲಿರುವ ಶಾಲೆ ಸರ್ಕಾರಿ ಶಾಲೆಯಲ್ಲ ಹೀಗಾಗಿ ಸರ್ಕಾರದ ಆದೇಶ ಇಲ್ಲಿ ಪಾಲನೆಯಾಗುವುದಿಲ್ಲ. ಹೀಗಾಗಿ ಭಾಗವತ್ ಅವರು ಶಾಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆಂದು ಹೇಳಲಾಗುತ್ತಿತ್ತು.