ಗುರುಗ್ರಾಮ: 'ಪದ್ಮವಾತ್' ವಿರೋಧಿಸಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಶ್ರೀ ಕರ್ಣಿ ಸೇನಾ ರಾಷ್ಟ್ರೀಯ ಕಾರ್ಯದರ್ಶಿ ಸೂರಜ್ ಪಾಲ್ ಅಮು ಅವರನ್ನು ಶುಕ್ರವಾರ ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಸೂರಜ್ ಪಾಲ್ ಅವರನ್ನು ಪೊಲೀಸರು ನಿನ್ನೆಯೇ ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಇಂದು ಬೆಳಗ್ಗೆ ನಗರದಲ್ಲಿ ಶಾಂತಿ ಕದಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಸೂರಜ್ ಪಾಲ್ ಗೆ ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಗುರುಗ್ರಾಮ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರವೀಂದರ್ ಕುಮಾರ್ ಅವರು ತಿಳಿಸಿದ್ದಾರೆ.
ಕಳೆದ ಬುಧವಾರ ಗುರುಗ್ರಾಮದಲ್ಲಿ ಪದ್ಮಾವತ್ ಚಿತ್ರ ವಿರೋಧಿಸಿ 20ರಿಂದ 25 ಮಕ್ಕಳಿದ್ದ ಶಾಲಾ ಬಸ್ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದರು. ಅಲ್ಲದೆ ನೂರಾರು ಕರ್ಣಿ ಸೇನಾ ಕಾರ್ಯಕರ್ತರು ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ದರು. ಈ ಸಂಬಂಧ ನಿನ್ನೆ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದಾರೆ.