2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸಲು ಸರ್ಕಾರ ಬದ್ಧ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಸ್ಥಿರವಾಗಿರುವುದಿಲ್ಲ ಎಂದು ಅಂಬೇಡ್ಕರ್...
ಬಜೆಟ್ ಅಧಿವೇಶನಕ್ಕೆ ಮುನ್ನ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಬಜೆಟ್ ಅಧಿವೇಶನಕ್ಕೆ ಮುನ್ನ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
Updated on
ನವದೆಹಲಿ: ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಸ್ಥಿರವಾಗಿರುವುದಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತ್ತಿದ್ದರು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಭಾಷಣ ಆರಂಭಿಸಿದ್ದಾರೆ. 
2018ನೇ ಸಾಲಿನ ಮುಂಗಡ ಪತ್ರ ಅಧಿವೇಶನ ಆರಂಭದ ದಿನವಾದ ಇಂದು ಸಂಸತ್ತಿನ  ಉಭಯ ಸದನಗಳನ್ನುದ್ದೇಶಿಸಿ ಭಾಷಣ ಆರಂಭಿಸಿದ ಅವರು, 2018ನೇ ವರ್ಷ ನವ ಭಾರತದ ಉದಯಕ್ಕೆ ಕನಸು ಕಾಣುವ ವರ್ಷವಾಗಿದೆ. 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಸಮಾಜದ ದುರ್ಬಲ ವರ್ಗದವರ ಏಳಿಗೆಗಾಗಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾರತ, ರೈತರು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಕಾರ್ಮಿಕರ ಹಿತದೃಷ್ಟಿಗೆ ನಾವು ಯೋಚನೆ ಮಾಡಬೇಕಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ತ್ರಿವಳಿ ತಲಾಖ್ ಮಸೂದೆ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅನುಮೋದನೆಯಾಗುವ ಆಶಾವಾದ ಹೊಂದಿದ್ದೇನೆ. ಈ ಮಸೂದೆ ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಮುಸಲ್ಮಾನ ಮಹಿಳೆಯರು ಭೀತಿಯಿಲ್ಲದೆ ಗೌರವಯುತವಾಗಿ ಜೀವನ ನಡೆಸಬಹುದು. ಮಹಿಳಾ ನೌಕರರಿಗೆ 26 ವಾರಗಳ ಹೆರಿಗೆ ವೇತನ ಸಹಿತ ರಜೆ ಮಸೂದೆಯನ್ನು ಸರ್ಕಾರ ಅನುಮೋದಿಸಿರುವುದು ಶ್ಲಾಘನೀಯ ಎಂದು ರಾಷ್ಟ್ರಪತಿ ಹೇಳಿದರು.
ಭವಿಷ್ಯದ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಅಡಿಪಾಯವಾಗಿದ್ದು, ಶಾಲೆ ಮತ್ತು ಉನ್ನತ ವ್ಯಾಸಂಗ ವ್ಯವಸ್ಥೆಯನ್ನು ಬಲಪಡಿಸಿ ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ. ಹಳ್ಳಿಗಳಿಗೆ ಅಂತರ್ಜಾಲದ ವ್ಯವಸ್ಥೆ ನೀಡಲು ಸರ್ಕಾರ ಯತ್ನಿಸುತ್ತಿದ್ದು, ಈಗಾಗಲೇ 2.5 ಲಕ್ಷ ಪಂಚಾಯತ್ ಗಳಲ್ಲಿ ಇಂಟರ್ನೆಟ್ ಸೌಲಭ್ಯಗಳಿವೆ ಎಂದು ರಾಷ್ಟ್ರಪತಿ ವಿವರಿಸಿದರು.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರಕಲು ಆಧಾರ್ ಸಂಖ್ಯೆ ಸಹಾಯವಾಗುತ್ತದೆ. 
ಮೊನ್ನೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಸಿಯಾನ್ ರಾಷ್ಟ್ರಗಳ 10 ನಾಯಕರು ಅತಿಥಿಗಳಾಗಿ ಭಾಗವಹಿಸಿರುವುದು ಭಾರತದ ವಸುಧೈವ ಕುಟುಂಬಕಂ ತತ್ವವನ್ನು ಜಗತ್ತಿಗೆ ಸಾರುತ್ತದೆ ಎಂದು ರಾಷ್ಟ್ರಪತಿ ಹರ್ಷ ವ್ಯಕ್ತಪಡಿಸಿದರು.
ಇಂದು ಸರ್ಕಾರದ 400ಕ್ಕೂ ಹೆಚ್ಚು ಯೋಜನೆಗಳಲ್ಲಿ ಡಿಜಿಟಲ್ ಪಾವತಿ ವಿಧಾನವನ್ನು ಜಾರಿಗೆ ತರಲಾಗಿದೆ. ಭೀಮ್ ಆಪ್ ಡಿಜಿಟಲ್ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಆರಂಭಗೊಂಡ ಉಮಂಗ್ ಆಪ್ ಮೂಲಕ ಮೊಬೈಲ್ ಫೋನ್ ಗಳಲ್ಲಿ 100ಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳು ದೊರಕುತ್ತವೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಕಾರ್ಮಿಕರ ಕನಿಷ್ಟ ವೇತನವನ್ನು ಕೇಂದ್ರ ಸರ್ಕಾರ ಶೇಕಡಾ 40ರಷ್ಟು ಏರಿಕೆ ಮಾಡಿದ್ದು, ಕಾರ್ಮಿಕ ಕಾನೂನನ್ನು ಅನುಷ್ಠಾನಕ್ಕೆ ತರಲಾಗಿದ್ದು ಶ್ರಮ ಸುವಿಧ ಪೋರ್ಟಲ್ ಎಂಬ ಆನ್ ಲೈನ್ ಸೇವೆಯನ್ನು ಸರ್ಕಾರ ಆರಂಭಿಸಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ಬೆಳೆಸಲು ಸರ್ಕಾರ 2,400 ಅಟಲ್ ಟಿಂಕರಿಂಗ್ ಲ್ಯಾಬ್ಸ್ ಎಂಬ ಯೋಜನೆಯನ್ನು ಅಟಲ್ ಇನ್ನೊವೇಶನ್ ಮಿಷನ್ ನಡಿ ತಂದಿದೆ. ದೀನದಯಾಳ್ ಅಮೃತ ಯೋಜನೆಯಡಿ  ಜೀವ ಉಳಿಕೆಯ ಔಷಧಗಳು ಮತ್ತು ಆಪರೇಷನ್ ಸಾಧನಗಳನ್ನು 111 ಕೇಂದ್ರಗಳಲ್ಲಿ ಶೇಕಡಾ 60ರಿಂದ 90ರಷ್ಟು ಕಡಿತ ದರದಲ್ಲಿ ನೀಡಲಾಗುತ್ತಿದೆ. ಇದರಿಂದ ಬಡವರಿಗೆ ಅನುಕೂಲವಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಮೂಲಕ ಬಡವರಿಗೆ ಅಗ್ಗದ ದರದಲ್ಲಿ ಔಷಧಗಳನ್ನು ಒದಗಿಸಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ನೀತಿಯಡಿ ಬಡ ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ಸಿಗಲು ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.ಸಾಂಪ್ರದಾಯಿಕ ಕ್ರಮಗಳಾದ ಯೋಗ, ಆಯುರ್ವೇದಗಳ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡಲು ರಾಷ್ಟ್ರೀಯ ಆಯುಷ್ ಮಿಷನ್ ಜಾರಿಗೆ ತರಲಾಗಿದೆ ಎಂದು ರಾಷ್ಟ್ರಪತಿ ಭಾಷಣದಲ್ಲಿ ಪ್ರಸ್ತಾಪಿಸಿದರು.
ದೇಶದ ಯುವಜನತೆಯ ಉದ್ದಾರಕ್ಕಾಗಿ ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಕೌಶಲಾಭಿವೃದ್ಧಿ ಮತ್ತು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವ ಉದ್ಯೋಗ ಮಾಡುವವರಿಗೆ ತಮ್ಮ ಕನಸುಗಳನ್ನು ಈಡೇರಿಸಲು ಇದೊಂದು ವೇದಿಕೆಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com