ಲಖನೌ: ಮಹಾರಾಷ್ಟ್ರ ನಂತರ ಈಗ ಉತ್ತರ ಪ್ರದೇಶದಲ್ಲೂ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದ್ದು, ಜುಲೈ 15ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಇತ್ತೀಚಿಗಷ್ಟೇ ಅಲಹಬಾದ್ ಹೈಕೋರ್ಟ್ ಸಹ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಜುಲೈ 15ರಿಂದ ಪ್ಲಾಸ್ಟಿಕ್ ಉತ್ಪಾದನೆ, ಬಳಕೆ, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿದೆ.
ಎರಡು ವಾರಗಳ ಹಿಂದಷ್ಟೇ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧ ಹೇರಿದ್ದು, ಆದೇಶ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸಿದರೆ, ಮಾರಾಟ ಮಾಡಿದರೆ ಮೊದಲ ಬಾರಿ 5 ಸಾವಿರ ರುಪಾಯಿ ದಂಡ, ಎರಡನೇ ಬಾರಿ ಸಿಕ್ಕರೆ 10 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕರೆ 25 ಸಾವಿರ ರುಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.