ತಿರುವನಂತಪುರಂ: 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದರೆ ದೇಶದಲ್ಲಿ 'ಹಿಂದೂ ಪಾಕಿಸ್ತಾನ'ದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದ್ದಾರೆ.
ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸದ ಪಾಕಿಸ್ತಾನದ ಮಾದರಿಯಲ್ಲಿ ಬಿಜೆಪಿ ಹೊಸ ಸಂವಿಧಾನವನ್ನು ಬರೆಯಲಿದೆ. ದೇಶದ ಪ್ರಜಾಸತ್ತಾತ್ಮಕ ಸಂವಿಧಾನವು ನಾವು ಅರ್ಥಮಾಡಿಕೊಂಡಿರುವಂತೆ ಉಳಿಯುವುದಿಲ್ಲ. ಮೂಲ ಆಶಯಗಳನ್ನು ಸಂವಿಧಾನದಿಂದ ಬೇರ್ಪಡಿಸಿ ಹೊಸ ಸಂವಿಧಾನವನ್ನು ಬರೆಯಲಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ತತ್ವ ಸಿದ್ಧಾಂತಗಳನ್ನು ಹೊಸ ಸಂವಿಧಾನವು ಹೊಂದಿರಲಿದೆ. ಅದರಲ್ಲಿ ಅಲ್ಪಸಂಖ್ಯಾತರ ಸಮಾನತೆಯನ್ನು ತೆಗೆದುಹಾಕಲಾಗುತ್ತದೆ. ಈ ಮೂಲಕ ಹಿಂದೂ ಪಾಕಿಸ್ತಾನ ವಾತಾವರಣವನ್ನು ನಿರ್ಮಿಸಲಾಗುತ್ತದೆ ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಬಾಯ್ ಪಟೇಲ್, ಮೌಲಾನಾ ಆಜಾದ್ ರಂತಹ ಮಹಾನ್ ನಾಯಕರ ಆಶಯದಂತಿರುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.