ಗೋರಖ್ಪುರ(ಉತ್ತರ ಪ್ರದೇಶ): ತನ್ನ ಸಹೋದರನ ಕೊಲೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಊಟ ಮಾಡುವ ಬಿಸಿಯೂಟಕ್ಕೆ ವಿಷ ಹಾಕುವ ಯತ್ನ ನಡೆಸಿದ್ದ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಂಕಟ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಬುಲಿಯಾ ಹಳ್ಳಿಯಲ್ಲಿರುವ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಶಾಲೆಯಲ್ಲಿ ಬಿಸಿಯೂಟಕ್ಕಾಗಿ ಬೇಯಿಸಿದ ಆಹಾರದ ಪಾತ್ರೆಗೆ ವಿದ್ಯಾರ್ಥಿನಿಯು ವಿಷ ಬೆರೆಸಿದ್ದಾಳೆ ಎಂದು ಶಾಲಾ ಆಡಳಿತ ಮಂಡಳಿ ಪೋಲೀಸರಿಗೆ ದೂರು ಸಲ್ಲಿಸಿದ್ದರು.
ವಿದ್ಯಾರ್ಥಿಗಳು ಊಟ ಮಾಡುವ ಮುನ್ನವೇ ವಿಚಾರ ತಿಳಿದದ್ದರಿಂದ ಯಾವ ಜೀವಹಾನಿಯೂ ಸಂಭವಿಸಿಲ್ಲ. ವಿದ್ಯಾರ್ಥಿನಿಯು ಆಹಾರದಲ್ಲಿ ವಿಷ ಬೆರೆಸಿದ್ದು ತಿಳಿದ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿದ್ದಲ್ಲದೆ ಆಕೆಯ ತಾಯಿಗೆ ಥಳಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ವಿದ್ಯಾರ್ಥಿನಿಯ ತಮ್ಮ 3 ನೇ ತರಗತಿ ವಿದ್ಯಾರ್ಥಿಯು ಶಾಲೆಯ 5 ನೇ ತರಗತಿ ವಿದ್ಯಾರ್ಥಿಯಿಂದ ಕೊಲೆಯಾಗಿದ್ದ. ಈ ಕೊಲೆಗೆ ಸೇಡು ತೀರಿಸಿಕೊಳ್ಳಬೇಕೆಂದು ವಿದ್ಯಾರ್ಥಿನಿ ಬಯಸಿದ್ದಳು. ಇದೇ ಕಾರಣಕ್ಕಾ ಆಕೆ ಬಿಸಿಯೂಟದಲ್ಲಿ ವಿಷ ಬೆರೆಸಿದ್ದಾಳೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಆದರೆ ಬಾಲಕಿಯು ತನ್ನ ಮೇಲಿನ ಆರೋಪ ನಿರಾಕರಿಸಿದ್ದಾಳೆ. ಸದ್ಯ ವಿದ್ಯಾರ್ಥಿನಿಯ ಮೇಲೆ ಐಪಿಸಿ ಸೆಕ್ಷನ್ 328ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಅವಳನ್ನು ಬಾಲಾಪರಾಧುಇಗಳ ಗೃಹಕ್ಕೆ ಕಳಿಸಲು ಯೋಜಿಸಲಾಗಿದೆ.