ಪಾಟ್ನಾ : ಬಿಹಾರದ ಆರ್ ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಡಿಯೋಗಾರ್ ನ ಬಾಬಾ ಬೈದ್ಯನಾಥ್ ಧಾಮ್ ಗೆ ತೆರಳುವ ಮುನ್ನ ಇಂದು ಶಿವನ ಗೆಟಪ್ ನಲ್ಲಿ ಇಲ್ಲಿನ ಶಿವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಜನರ ಕಲ್ಯಾಣ ಹಾಗೂ ಅವರ ತಂದೆ ಲಾಲು ಪ್ರಸಾದ್ ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಯಾವುದೇ ವಿಭಜನೆಗೊಳಪಡದೇ ದೇಶದಲ್ಲಿನ ಎಲ್ಲ ಜನರು ಶಾಂತಿ, ಸೌಹಾರ್ದತೆಯಿಂದ ಬಾಳುವಂತಾಗಲು ಹಾಗೂ ಬಿಹಾರ ಜನರ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದ ತೇಜ್ ಪ್ರತಾಪ್, ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸುಧಾರಿಸಿ ಧೀರ್ಘ ಕಾಲ ಬದುಕಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.
ವಿಶೇಷ ಚಿಕಿತ್ಸೆಗಾಗಿ ಲಾಲೂ ಪ್ರಸಾದ್ ಯಾದವ್ ಮಾ.29 ರಂದು ಏಮ್ಸ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ನಂತರ ರಾಂಚಿಯ ರಾಜೇಂದ್ರ ಮೆಡಿಕಲ್ ಕಾಲೇಜ್ ಹಾಗೂ ಮುಂಬೈಯ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು.
ಮುಂಬೈಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಪಡೆದ ನಂತರ ಜುಲೈ 8 ರಂದು ಆರ್ ಜೆಡಿ ವರಿಷ್ಠರು ಪಾಟ್ನಾಕ್ಕೆ ವಾಪಾಸ್ ಆಗಿದ್ದರು. ಕಳೆದ ವರ್ಷ ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ತೇಜ್ ಪ್ರತಾಪ್ ಕೃಷ್ಣ ಗೆಟಪ್ ನಲ್ಲಿ ಕಾಣಸಿಕೊಂಡಿದ್ದು, ದೇಶಾದ್ಯಂತ ಸುದ್ದಿಯಾಗಿದ್ದರು.
Advertisement