ನವದೆಹಲಿ: ಪುತ್ರಿ ಆರುಷಿ ತಲ್ವಾರ್ ಹತ್ಯೆ ಪ್ರಕರಣದಲ್ಲಿ ತಲ್ವಾರ್ ದಂಪತಿಯ ಖುಲಾಸೆ ಪ್ರಶ್ನಿಸಿ ಸಿಬಿಐ ಅಧಿಕಾರಿಗಳು ಗುರುವಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಆರುಷಿ ತಲ್ವಾರ್-ಹೇಮರಾಜ್ ಡಬಲ್ ಮರ್ಡರ್ ಕೇಸ್ ನಲ್ಲಿ 2017ರ ಅಕ್ಟೋಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗಳಿಗೆ ಕ್ಲೀನ್ ಚಿಟ್ ನೀಡಿತ್ತು.
ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 14 ವರ್ಷ ಪ್ರಾಯದ ಆರುಷಿ ತಲ್ವಾರ್ ಕೊಲೆ ಪ್ರಕರಣದಲ್ಲಿ ತಪ್ಪಾಗಿ ರಾಜೇಶ್ ಮತ್ತು ನೂಪುರ್ ದಂಪತಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸಿಬಿಐ ಮೇಲ್ಮನವಿಯಲ್ಲಿ ವಾದಿಸಿದೆ.
ತಲ್ವಾರ್ ದಂಪತಿಗಳನ್ನು ಅಪರಾಧಿಗಳೆನ್ನಲು ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ಹೇಳಿ ಅಲಹಾಬಾದ್ ಹೈಕೋರ್ಟ್ ಇಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಬಳಿಕ ಕಳೆದ ಅಕ್ಟೋಬರ್ ನಲ್ಲಿ ತಲ್ಪಾರ್ ದಂಪತಿ ಜೈಲಿನಿಂದ ಬಿಡುಗಡೆಯಾಗಿದ್ದರು.
ಇದಕ್ಕೂ ಮೊದಲು 2013ರಲ್ಲಿ ಗಾಜಿಯಾಬಾದ್ ನ ಸಿಬಿಐ ನ್ಯಾಯಾಲಯ ತಲ್ವಾರ್ ದಂಪತಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು.
2008ರಲ್ಲಿ ಆರುಷಿ ತಲ್ವಾರ್ ಮತ್ತು ಅವರ ಮನೆ ಕೆಲಸದ ಆಳು ಹೇಮರಾಜ್ ನಿಗೂಢವಾಗಿ ಕೊಲೆಯಾಗಿದ್ದರು. ಕೊಲೆ ನಡೆದು 10 ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.