ಜಮ್ಮು: ಭಾರತ ಮತ್ತು ಪಾಕಿಸ್ತಾನ ಇಂದು ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ. ಎರಡೂ ದೇಶಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ಪುನರಾರಂಭಿಸಬೇಕು. ಅಲ್ಲದೆ ವಲಸೆ ಹೋದ ಕಾಶ್ಮೀರ ಪಂಡಿತರು ಮತ್ತೆ ತಮ್ಮ ಮೂಲ ಸ್ಥಳಕ್ಕೆ ಹಿಂತಿರುಗಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಒತ್ತಾಯಿಸಿದ್ದಾರೆ.
ಇದೇ ರೀತಿಯ ಹೇಳಿಕೆಯನ್ನು ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಕೂಡ ಹೇಳಿದ್ದರು. ಪಾಕಿಸ್ತಾನದ ಜೊತೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತೋರಿದ್ದ ಒಲವನ್ನು ಕೂಡ ಮೆಹಬೂಬ ಮುಫ್ತಿ ಉದಾಹರಣೆಯಾಗಿ ನೀಡಿದ್ದಾರೆ.
ವಾಜಪೇಯಿಯವರು ಮಾಡಿದಂತೆ ನಾನು ಪ್ರಧಾನಿ ಮೋದಿಯವರನ್ನು ಕೂಡ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಎಂದು ಒತ್ತಾಯಿಸುತ್ತೇನೆ. ನಾವಾಗಲೀ ಪಾಕಿಸ್ತಾನದವರಾಗಲಿ ಯುದ್ಧ ಮಾಡುವ ಸ್ಥಿತಿಯಲ್ಲಿ ಇಂದು ಇಲ್ಲ. ಯುದ್ಧ ನಡೆದರೆ ಯಾರೂ ಉಳಿಯುವುದಿಲ್ಲ ಎಂಬುದು ಎರಡೂ ದೇಶದವರಿಗೆ ಚೆನ್ನಾಗಿ ಗೊತ್ತಿದೆ. ಎರಡೂ ದೇಶಗಳು ಸಾಕಷ್ಟು ಕಳೆದುಕೊಳ್ಳುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
1990ರಲ್ಲಿ ಯುದ್ಧ, ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಕಾಶ್ಮೀರ ಬಿಟ್ಟು ವಲಸೆ ಹೋಗಿದ್ದ ಪಂಡಿತರು ಮತ್ತೆ ತಮ್ಮ ಮೂಲ ನೆಲೆಗೆ ಮರಳುವಂತೆ ಕೂಡ ಅವರು ಒತ್ತಾಯಿಸಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತೆ ತಮ್ಮ ತಾಯ್ನಾಡಿಗೆ ಮರಳಬೇಕು, ಅವರ ಮಕ್ಕಳು, ಮೊಮ್ಮಕ್ಕಳಿಗೆ ತಮ್ಮ ತಾಯ್ನಾಡು ಯಾವುದು ಎಂದು ಗೊತ್ತಾಗಬೇಕು. ಅವರಿಗೆ ನಾವು ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಹಿಂದೆ ನಡೆದಿದ್ದು ದುರದೃಷ್ಣ. ಆದರೆ ಇಂದು ಅವೆಲ್ಲವನ್ನೂ ಬಿಟ್ಟು ಮುಂದೆ ಸಾಗಬೇಕಿದೆ ಎಂದರು.
Advertisement