ನವದೆಹಲಿ : ಪ್ರಧಾನಿಯಾಗಲು ಸಿದ್ಧ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್, ಕಾಂಗ್ರೆಸ್ ಪಕ್ಷ ಎಲ್ಲೆಡೆ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಉನ್ನತ ಕನಸುಗಳನ್ನು ಕಾಣುತ್ತಿರುವವರು ಮೊದಲು ರಾಜ್ಯ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಪ್ರಧಾನಿಯಾಗಲು ಕನಸು ಕಾಣುವ ಹಕ್ಕು ರಾಹುಲ್ ಗಾಂಧಿ ಅವರಿಗೆ ಇದೆ. ಆದರೆ, ಅವರನ್ನು ನಾಯಕರೆಂದು ಕಾಂಗ್ರೆಸ್ ಪಕ್ಷದ ಅಂಗಪಕ್ಷಗಳೇ ಒಪ್ಪಿಕೊಳ್ಳುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ರಾಹುಲ್ ಗಾಂಧಿ ಎಐಸಿಸಿ ಉಪಾಧ್ಯಕ್ಷರಾದ ಬಳಿಕ ಕಾಂಗ್ರೆಸ್ 13 ರಾಜ್ಯಗಳಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಕರ್ನಾಟಕ ಆರನೇ ರಾಜ್ಯವಾಗಲಿದೆ ಎಂದರು.
ರಾಹುಲ್ ಗಾಂಧಿ ಮನಸ್ಸಿನೊಳಗಿದ್ದ ಭಾವನೆ ಹೊರಗೆ ಬಂದಿದೆ. ಆದರೆ, ಅದು ಅಷ್ಟು ಸುಲಭವಲ್ಲಾ, ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಯಾವ ರಾಜ್ಯಗಳಲ್ಲಿಯೂ ಚುನಾವಣೆ ಗೆಲ್ಲುವುದಿಲ್ಲ. ಪ್ರಧಾನಿಯಾಗುವುದು ಅವರ ಕನಸು ಆಗಲಿದ್ದು, ಪ್ರಧಾನಿ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹುಸೇನ್ ಒತ್ತಿ ಹೇಳಿದರು.
ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸೋಲಲಿದೆ. ಇಲ್ಲಿಯೂ ಸೋತ ನಂತರ ರಾಹುಲ್ ಗಾಂಧಿ ಸಿಕ್ಸರ್ ಬಾರಿಸಲಿದ್ದಾರೆ ಎಂದು ಶಹನವಾಜ್ ಹುಸೇನ್ ಲೇವಡಿ ಮಾಡಿದರು.
Advertisement