ಎಲ್ಲರನ್ನೂ ಒಳಗೊಂಡ ದೇಶದ ಬೆಳವಣಿಗೆಗೆ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ: ಮುಕ್ತಾರ್ ಅಬ್ಬಾಸ್ ನಖ್ವಿ
ನವದೆಹಲಿ: ಜಾತಿ, ಧರ್ಮಗಳನ್ನು ಹೊರತುಪಡಿಸಿ ಎಲ್ಲರನ್ನೂ ಒಳಗೊಂಡ ದೇಶದ ಬೆಳವಣಿಗೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಜಾತಿ, ಧರ್ಮಗಳ ಅಡ್ಡಗೋಡೆಯಾಚೆಗೆ ಯಾವುದೇ ತಾರತಮ್ಯ ಮಾಡದೆ ದೇಶದ ಪ್ರತಿಯೊಬ್ಬ ಪ್ರಜೆಗಳನ್ನು ಒಳಗೊಂಡ ದೇಶದ ಬೆಳವಣಿಗೆಗೆ ಪ್ರಧಾನ ಮಂತ್ರಿ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೇ ಆಗಲಿ ಪ್ರಗತಿಶೀಲ ಮನಸ್ಸುಗಳಂತೆ ಯೋಚಿಸಬೇಕು ಎಂದು ನಖ್ವಿ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.
ದೆಹಲಿಯ ಆರ್ಚ್ ಬಿಷಪ್ ಅನಿಲ್ ಜೋಸೆಫ್ ಕೌಟೊ, 2019ರ ಲೋಕಸಭೆ ಚುನಾವಣೆಗೆ ಮುನ್ನ ದೇಶದಲ್ಲಿ ಜಾತ್ಯತೀತತೆಗೆ ವರ್ಷವಿಡೀ ಪ್ರಾರ್ಥಿಸೋಣ ಎಂದು ಪತ್ರ ಬರೆದದಕ್ಕೆ ಪ್ರತಿಕ್ರಿಯೆಯಾಗಿ ಹೇಳಿದ್ದಾರೆ.
ಆದರೆ ಈ ಪತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿಯ ಆರ್ಚ್ ಬಿಷಪ್ ನ ಫಾದರ್ ರಾಬಿನ್ಸನ್, ಈ ಪತ್ರವು ಕೇವಲ ಒಂದು ಆಹ್ವಾನ ಮಾತ್ರವಾಗಿದ್ದು, ಇದು ಕೇಂದ್ರ ಸರ್ಕಾರದ ವಿರುದ್ಧವಾಗಲಿ ಅಥವಾ ಪ್ರಧಾನಿಗಳ ವಿರುದ್ಧವಾಗಲಿ ಅಲ್ಲ ಎಂದು ಸ್ಪಷ್ಟನೆ ನೀಡಿದೆ.
ಆರ್ಚ್ ಬಿಷಪ್ ಪತ್ರದ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಅದು ಸರ್ಕಾರದ ವಿರುದ್ಧವಾಗಲಿ, ಪ್ರಧಾನಿ ವಿರುದ್ಧವಾಗಲಿ ಅಲ್ಲ. ಈ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುವುದು ಬೇಡ. ಪ್ರಾರ್ಥನೆಗಾಗಿ ಮಾತ್ರ ಇದು ಆಹ್ವಾನವಷ್ಟೆ. ಈ ಹಿಂದೆ ಕೂಡ ಇಂತಹ ಪತ್ರಗಳನ್ನು ಬರೆಯಲಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.