ಮಾರಣಾಂತಿಕ ನಿಪಾಹ್ ವೈರಸ್ ಸೋಂಕಿಗೆ ಬಾವಲಿಗಳು ಕಾರಣವಲ್ಲ: ವರದಿ

ಕೇರಳದಲ್ಲಿ 12 ಜನರನ್ನು ಬಲಿ ಪಡೆದ ನಿಪಾಹ್ ವೈರಸ್ ​ಗೆ ಪ್ರಸರಣಕ್ಕೆ ಬಾವಲಿ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇರಳದಲ್ಲಿ 12 ಜನರನ್ನು ಬಲಿ ಪಡೆದ ನಿಪಾಹ್ ವೈರಸ್ ​ಗೆ ಪ್ರಸರಣಕ್ಕೆ ಬಾವಲಿ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಬಗ್ಗೆ ನಡೆದ ವೈದ್ಯಕೀಯ ತನಿಖೆ ಇದನ್ನು ಸಾಬೀತು ಪಡಿಸಿದ್ದು, ಬಾವಲಿಗಳು ತಿಂದಿದ್ದ ಹಣ್ಣು ತಿಂದರೆ ಈ ವೈರಸ್​ ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದು ಸತ್ಯವಲ್ಲ ಎಂಬುದು ವೈದ್ಯಕೀಯ ವರದಿಯಿಂದಲೇ ಸಾಬೀತಾಗಿದೆ. 
ನಿಪಾಹ್ ವೈರಸ್​ ಆತಂಕದ ಹಿನ್ನೆಲೆಯಲ್ಲಿ ಭೂಪಾಲ್​ನಲ್ಲಿರುವ ಹೈ ಸೆಕ್ಯೂರಿಟಿ ಪ್ರಾಣಿರೋಗಗಳ ಪರೀಕ್ಷಾ ರಾಷ್ಟ್ರೀಯ ಸಂಸ್ಥೆಯಲ್ಲಿ 21 ಬಾವಲಿಗಳ ರಕ್ತ ಮತ್ತು ಸೀರಮ್ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ, ಕೇರಳದಲ್ಲಿ ಮೃತಪಟ್ಟವರ ಮನೆಯಲ್ಲಿದ್ದ ಬಾವಲಿಗಳ ರಕ್ತವನ್ನೂ ಪರೀಶೀಲನೆ ಮಾಡಲಾಗಿತ್ತು. ಆದರೆ ಯಾವುದರಲ್ಲೂ ವೈರಸ್​ ಇಲ್ಲವೆಂಬುದು ವರದಿಯಲ್ಲಿ ಸಾಬೀತಾಗಿದೆ ಎಂದು ತಿಳಿದುಬಂದಿದೆ.
ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಶುಕ್ರವಾರ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾಹ್ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಈ ಹಿಂದೆ ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾಹ್ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಆದರೆ ಅಲ್ಲಿಯ ಪ್ರಾಣಿಗಳಲ್ಲೂ ನಿಪಾಹ್ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಎನ್ನಲಾಗಿದೆ.
ಸದ್ಯ ನಿಪಾಹ್ ವೈರಾಣು ಪ್ರಸರಣಕ್ಕೆ ಕಾರಣವಾದ ವಿಚಾರದ ಕುರಿತು ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾಹ್ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೆಟರಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com