ಸಂಗ್ರಹ ಚಿತ್ರ
ದೇಶ
ಕಾಶ್ಮೀರ ಸಿಎಂ ವಿರುದ್ಧ ಅವಹೇಳನಕಾರಿ ಪದ ಬಳಕೆ, ಬಿಜೆಪಿ ಮುಖಂಡನ ವಿರುದ್ಧ ಬಂಧನ ವಾರಂಟ್
ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡನ ವಿರುದ್ಧ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡನ ವಿರುದ್ಧ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ.
ಕಥುವಾ ಅತ್ಯಾಚಾರ ಸಂಬಂಧ ಸಿಬಿಐ ತನಿಖೆಗೆ ಆಗ್ರಹಿಸಿ, ಬಿಜೆಪಿ ನಾಯಕ ಹಾಗೂ ರಾಜ್ಯದ ಮಾಜಿ ಸಚಿವ ಲಾಲ್ ಸಿಂಗ್ ಅವರ ಸಹೋದರ ಚೌದರಿ ರಾಜಿಂದರ್ ಸಿಂಗ್ ರ್ಯಾಲಿ ನಡೆಸುತ್ತಿದ್ದರು. ಈ ನಡುವೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ ವೇಳೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ವಿರುದ್ಧ ಅವಮಾನಕಾರಿ ಭಾಷೆಯನ್ನು ಬಳಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಜಿಂದರ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 509, ಜಮ್ಮು ಮತ್ತು ಕಾಶ್ಮೀರ ವಿಶೇಷ ಕಾಯ್ದೆ 66ಎ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣ ಸಂಬಂಧ ಕೋರ್ಟ್ ನಲ್ಲಿ ಅರ್ಜಿ ಕೂಡ ದಾಖಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕಥುವಾ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಎಎಸ್ ಲಂಗೇಹ್ ಅವರು ರಾಜಿಂದರ್ ಸಿಂಗ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ.
ಜನವರಿಯಲ್ಲಿ ನಡೆದಿದ್ದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಕುರಿತು ಸಿಬಿಐ ತನಿಖೆಗೆ ಒತ್ತಡ ಹೇರಲು ಸೋಮವಾರ ಬೆಳಿಗ್ಗೆ ಕಥುವಾ ಜಿಲ್ಲೆಯಲ್ಲಿ ಲಖನಪುರದಿಂದ ಹಿರಾನಗರವರೆಗೆ ಬೃಹತ್‘ಡೋಗ್ರಿ ಸ್ವಾಭಿಮಾನ್’ ರ್ಯಾಲಿಯನ್ನು ನಡೆಸಲಾಗಿತ್ತು. ಇದೇ ರ್ಯಾಲಿಗೆ ಬೆಂಬಲ ನೀಡುವ ಸಂಬಂಧ ಚೌದರಿ ಲಾಲ್ ಸಿಂಗ್ ಕೂಡ ತಮ್ಮ ಎಂಎಲ್ ಸಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ರ್ಯಾಲಿ ವೇಳೆ ಲಾಲ್ ಸಿಂಗ್ ಅವರ ಕಿರಿಯ ಸೋದರ ಚೌಧರಿ ರಾಜಿಂದರ್ ಸಿಂಗ್ ವಾಹನವೊಂದರ ಮೇಲೆ ನಿಂತುಕೊಂಡು ಮುಖ್ಯಮಂತ್ರಿಗಳ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ್ದು 26 ಸೆಕೆಂಡ್ಗಳ ಈ ವೀಡಿಯೊ ತುಣುಕಿನಲ್ಲಿ ದಾಖಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ರಾಜಿಂದರ್ ಸಿಂಗ್ ಚೌದರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಆಗ್ರಹಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ