ತಿರುವನಂತಪುರ: ಚಾಲಕ ಅರ್ಜುನ್ ಕಾರು ಚಲಾಯಿಸುತ್ತಿದ್ದುದೆ ಹೊರತು ನನ್ನ ಪತಿ ಅಲ್ಲ ಎಂದು ಕೇರಳದ ಖ್ಯಾತ ಸಂಗೀತಗಾರ ಬಾಲಭಾಸ್ಕರ್ ಅವರ ಕಾರು ಅಪಘಾತ ಸಂಬಂಧ ಅವರ ಪತ್ನಿ ಲಕ್ಷ್ಮಿ ಪೊಲೀಸರಿಗೆ ವೈರುಧ್ಯ ಹೇಳಿಕೆ ನೀಡಿದ್ದಾರೆ,
ಈ ಹಿಂದೆ ಚಾಲಕ ಅರ್ಜುನ್ ಅಪಘಾತವಾದ ಸಂದರ್ಭದಲ್ಲಿ ಬಾಲ ಭಾಸ್ಕರ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಬಾಲಭಾಸ್ಕರ್ ಅವರು ಅಪಘಾತವಾದಾಗ ಹಿಂದಿನ ಸೀಟಿನಲ್ಲಿ ನಿದ್ದೆ ಮಾಡುತ್ತಿದ್ದರು ಎಂದು ಲಕ್ಷ್ಮಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ದೂರದ ಪ್ರಯಾಣ ಮಾಡುವಾಗ ಬಾಲಭಾಸ್ಕರ್ ಯಾವತ್ತಿಗೂ ಕಾರು ಓಡಿಸುತ್ತಿರಲಿಲ್ಲ. ಅಪಘಾತವಾದ ಸಂದರ್ಭದಲ್ಲಿ ತಾನು ಮಗಳು ತೇಜಸ್ವಿನಿ ಜೊತೆ ಮುಂದಿನ ಸೀಟಿನಲ್ಲಿ ಕುಳಿತಿದ್ದೆ ಎಂದಿದ್ದಾರೆ, ಎರಡು ದಿನಗಳ ಹಿಂದಷ್ಟೇ ಲಕ್ಷ್ಮಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊಲ್ಲಂ ಹತ್ತಿರ ಮುಟ್ಟಿದಾಗ ಬಾಲಭಾಸ್ಕರ್ ಅವರೇ ಕಾರು ಚಲಾಯಿಸಲು ಆರಂಭಿಸಿದರು ಎಂದು ಈ ಹಿಂದೆ ಅರ್ಜುನ್ ಹೇಳಿದ್ದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ 25ರಂದು ಪಲ್ಲಿಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಾಲಭಾಸ್ಕರ್ ಮತ್ತು ಅವರ ಮಗಳು ಮೃತಪಟ್ಟಿದ್ದರು. ಅವರ ಪತ್ನಿ ಲಕ್ಷ್ಮಿ ಹಾಗೂ ಕಾರಿನ ಚಾಲಕ ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದರು.
Advertisement