ಇಂದೋರ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮಂಗಳವಾರ ಹೇಳಿದ್ದಾರೆ.
ಇಂದೋರ್ ನಲ್ಲಿ ಮಾತನಾಡಿದ ಅವರು, ಅನಾರೋಗ್ಯದ ಕಾರಣದಿಂದ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದು, 'ನಾನಂತೂ ಚುನಾವಣೆಗೆ ಸ್ಪರ್ಧಿಸ ಬಾರದು ಎಂದು ನಿಶ್ಚಯಿಸಿರುವೆ, ಇದನ್ನು ಪಕ್ಷದ ವರಿಷ್ಠರಿಗೂ ಹೇಳಿದ್ದೇನೆ. ಆದರೆ, ಪಕ್ಷದ ನಿಲುವು ಏನಿದೆಯೋ ಗೊತ್ತಿಲ್ಲ' ಎಂದು ಹೇಳಿದ್ದಾರೆ.
ಮೂತ್ರಪಿಂಡ ಕಾರ್ಯ ವಿಫಲವಾಗಿದ್ದರಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಸುಷ್ಮಾಗೆ 2016ರ ಡಿಸೆಂಬರ್ ನಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದಾದ ನಂತರ ಹಲವು ತಿಂಗಳು ವಿಶ್ರಾಂತಿಯಲ್ಲಿದ್ದರು. ಸುಷ್ಮಾರಿಗೆ ಮಧುಮೇಹ ಸಮಸ್ಯೆ ಕೂಡ ಇದೆ. ಅನಾರೋಗ್ಯದ ಕಾರಣ ಅವರು 2016ರ ಮಧ್ಯಭಾಗದಿಂದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುವುದು ಇಳಿಮುಖವಾಗಿತ್ತು. ಸ್ವಕ್ಷೇತ್ರ ವಿದಿಶಾಕ್ಕೂ ಭೇಟಿ ನೀಡುವುದು ಅಪರೂಪವಾಯಿತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅವರು ಸಕ್ರಿಯರಾಗಿದ್ದು, ವಿದೇಶದಲ್ಲಿ ನೆಲೆಸಿರುವ ಭಾರತೀಯರ ಹಲವು ಸಮಸ್ಯೆಗಳನ್ನು ಟ್ವಿಟರ್ ಖಾತೆಯಿಂದ ತಿಳಿದುಕೊಂಡು, ಪರಿಹಾರ ಒದಗಿಸುತ್ತಿದ್ದಾರೆ.
You are right, Swapan. I am not retiring from politics. It is just that I am not contesting the next Lok Sabha election due to my health issues. https://t.co/jF5GpPvVwU