ತಿರುವನಂತಪುರ: ಶಬರಿಮಲೆ ದೇಗುಲವನ್ನು ಮತ್ತೊಂದು ಅಯೋಧ್ಯೆಯಾಗಿ ಮಾಡಲು ಸಂಘ ಪರಿವಾರದವರಿಗೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕರ ಸೇವಕರ ಮೂಲಕ ಸಂಘ ಪರಿವಾರದವರು ಶಬರಿಮಲೆಯನ್ನು ಹೈಜಾಕ್ ಮಾಡಲು ಪಿತೂರಿ ನಡೆಸುತ್ತಿದ್ದಾರೆ. ನಂಬಿಕೆಯ ಹೆಸರಿನಲ್ಲು ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಆರ್'ಎಸ್ಎಸ್ ಜೊತೆಗೂಡಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟೂ ಮಾಡಲು ಯತ್ನಿಸುತ್ತಿದೆ. ಪ್ರತಿಭಟನೆಯ ನಿಜವಾದ ಉದ್ದೇಶಗಳು ಈಗಾಗಲೇ ಬಹಿರಂಗಗೊಂಡಿದೆ. ತನ್ನ ರಾಜಕೀಯ ಹೋರಾಟಕ್ಕಾಗಿ ದೇಗುಲ ಬಳಕೆ ಮಾಡಿಕೊಳ್ಳುವುದನ್ನು ಬಿಜೆಪಿ ನಿಲ್ಲಿಸಬೇಕು. ತಮ್ಮ ರಾಜಕೀಯ ಲಾಭಕ್ಕಾಗಿ ಭಕ್ತಾದಿಗಳಿಗೆ ಸಮಸ್ಯೆಗಲನ್ನು ನೀಡಬಾರದು.
ರಾಜಕೀಯ ಹೋರಾಟ ನಡೆಸಲೇಬೇಕಿದ್ದರೆ, ನಮ್ಮ ಹಾಗೂ ನಿಮ್ಮ ನಡುವೆ ನೇರನೇರ ನಡೆಯಲಿ. ಇದಕ್ಕೆ ಶಬರಿಮಲೆ ವೇದಿಕೆಯೇಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.