ಕಾಸರಗೋಡು: ಕೇರಳದ ದೇವಸ್ವಂ ಇಲಾಖೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ದೇವಸ್ಥಾನದ ಅರ್ಚಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ನಂತರ ಮಡಿಯನ್ ಕೂಲಮ್ ಕ್ಷೇತ್ರ ಪಲಾಕ ದೇವಸ್ಥಾನದ ಮುಖ್ಯ ಅರ್ಚಕ ಟಿ ಮಾಧವನ್ ನಂಬೂಥ್ರಿ ಅವರನ್ನು ಅಮಾನತುಗೊಳಿಸಲಾಗಿದೆ.
ಈ ದೇವಸ್ಥಾನ ಮಲಬಾರ್ ದೇವಸ್ವಂ ಮಂಡಳಿ ಅಧೀನಕ್ಕೆ ಬರುತ್ತಿದ್ದು, ಬುಧವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ನಾನು ಕ್ಷೇತ್ರದ ಟ್ರಸ್ಟಿಯಾಗಿದ್ದು, ಅವರು ನನ್ನನ್ನು ಅಮಾನತು ಮಾಡಲು ಬರುವುದಿಲ್ಲ ಎಂದು ಮುಖ್ಯ ಅರ್ಚಕ ಮಾಧವನ್ ಅವರು ಹೇಳಿದ್ದಾರೆ.
ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಲು ಯತ್ನಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್ ಅವರನ್ನು ಬಂಧಿಸಿದ ನಂತರ ಅರ್ಚಕ ಮಾಧವನ್ ಅವರು ಫೇಸ್ ಬುಕ್ ನಲ್ಲಿ ದೇವಸ್ವಂ ಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು.