ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ನಲ್ಲಿ 12 ವರ್ಷಗಳಲ್ಲಿ ಏನು ಮಾಡಿದ್ದರು ಅದಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ಆಪ್ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ತಮ್ಮ ಸರ್ಕಾರದ ಸಾಧನೆಗಾಗಿ ಪಕ್ಷದ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರನ್ನು ಅಭಿನಂದಿಸಿದ ಕೇಜ್ರಿವಾಲ್, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಆಮ್ ಆದ್ಮಿ ಪಕ್ಷದ ರಾಜಕೀಯ ಹೋರಾಟ ಮುಂದುವರೆಯಲಿದೆ ಎಂದರು.
ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಹೊಂದಿರುವುದಕ್ಕೆ ದೆಹಲಿ ಜನತೆಗೆ ಹೆಮ್ಮೆ ಇದೆ. ನಾನು ದೇಶದ ಜನತೆಯನ್ನು ಕೇಳುತ್ತೇನೆ, ನಿಮ್ಮ ಪ್ರಧಾನಿ ಪ್ರಾಮಾಣಿಕರೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ರಾಫೆಲ್ ಹಗರಣ ಮತ್ತು ಗುಜರಾತ್ ಮಾದರಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಸಿಎಂ, ಮೋದಿ 12 ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ಆಪ್ ಸರ್ಕಾರ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.