ಆ್ಯಪಲ್ ಉದ್ಯೋಗಿ ಗುಂಡು ತಗುಲಿದ ನಂತರ 55 ನಿಮಿಷ ಬದುಕಿದ್ದರು: ವೈದ್ಯಕೀಯ ವರದಿ

ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಅವರು ಪೊಲೀಸರು ಹಾರಿಸಿದ ಗುಂಡು ತಗುಲಿದ ನಂತರ...
ವಿವೇಕ್ ತಿವಾರಿ
ವಿವೇಕ್ ತಿವಾರಿ
ಲಖನೌ: ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಅವರು ಪೊಲೀಸರು ಹಾರಿಸಿದ ಗುಂಡು ತಗುಲಿದ ನಂತರ 55 ನಿಮಿಷಗಳ ಕಾಲ ಬದುಕಿದ್ದರು ಎಂದು ವೈದ್ಯಕೀಯ ವರದಿ ತಿಳಿಸಿದೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವಿವೇಕ್ ತಿವಾರಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುತ್ತಿದ್ದರು. ಆದರೆ ಪೊಲೀಸರು ಸಕಾಲದಲ್ಲಿ ತಿವಾರಿಯನ್ನು ಆಸ್ಪತ್ರೆಗೆ ದಾಖಲಿಸಲು ವಿಫಲವಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಿವಾರಿ ಅವರು ಗುಂಡು ತಗುಲಿದ ಬಳಿಕವೂ ಸುಮಾರು 300 ಮೀಟರ್ ಗಳವರೆಗೆ ಕಾರು ಚಲಾಯಿಸಿ, ಅಂಡರ್ ಪಾಸ್ ಸಮೀಪಿದ ಕಂಬವೊಂದಕ್ಕೆ ಡಿಕ್ಕಿ ಹೊಡೆಸಿದರು.  ಪೊಲೀಸ್ ಪೇದೆಗಳಾದ ಪ್ರಶಾಂತ್ ಚೌಧರಿ ಮತ್ತು ಸಂದೀಪ್ ಕುಮಾರ್ ಅವರು ಸಮೀಪ ಬಂದು ನೋಡಿ, ಅಲ್ಲಿಂದ ತೆರಳಿದರು ಎಂದು ಪ್ರತ್ಯಕ್ಷದರ್ಶಿ ಹಾಗೂ ಸಹದ್ಯೋಗಿ ಸನಾ ಖಾನ್ ಹೇಳಿದ್ದಾರೆ.
ಸ್ವಲ್ಪ ಸಮಯದ ಬಳಿಕ ಪೊಲೀಸರ ಮತ್ತೊಂದು ಗಸ್ತು ವಾಹನ ಘಟನಾ ಸ್ಥಳಕ್ಕೆ ಆಗಮಿಸಿತು. ಆಗ ಪೊಲೀಸರು ಆಂಬುಲೆನ್ಸ್ ಗೆ ಫೋನ್ ಮಾಡಿದರು. ಪೊಲೀಸರು ಒಂದು ವೇಳೆ ಆಂಬುಲೆನ್ಸ್ ಗೆ ಕಾಯದೇ ವಿವೇಕ್ ಕಾರಿನಲ್ಲೇ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ವಿವೇಕ್ ಬದುಕುಳಿಯುತ್ತಿದ್ದರು. ಆದರ ಪೊಲೀಸರಿಗೆ ವಿವೇಕ್ ಚಿಕಿತ್ಸೆಗಿಂತಲೂ ನನ್ನ ಬಳಿ ಹೇಳಿಕೆ ಪಡೆಯುವುದೇ ಮುಖ್ಯವಾಗಿತ್ತು ಎಂದು ಸನಾ ಖಾನ್ ತಿಳಿಸಿದ್ದಾರೆ.
ಪೊಲೀಸರು ಹಾರಿಸಿದ ಗುಂಡು ವಿವೇಕ್ ತಿವಾರಿಯ ಎಡ ಭಾಗದ ಗದ್ದಕ್ಕೆ ತಗುಲಿದ್ದು, ಗುಂಡೇಟಿನಿಂದಲೇ ಅವರ ಸಾವು ಸಂಭವಿಸಿರುವುದು ದೃಢಪಟ್ಟಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com