ನಾಗ್ಪುರ್: ಅಪ್ರಾಪ್ತ ಬಾಲಕನನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ 18 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಗ್ಪುರ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಂಜಿನಿಯರಿಂಗ್ ಮಾಡುತ್ತಿದ್ದ ಸೌರಭ್ ನಾಗ್ಪುರಕರ್ ಎಂಬ ಯುವಕ ಕಳೆದ ಭಾನುವಾರ ತೀನ್ ನಾಲ್ ಚೌಕ್ ನಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೌರಭ್ ಒಂದು ತಿಂಗಳ ಹಿಂದೆ ಕಾಲೇಜ್ ಗೆ ಹೋಗುತ್ತಿದ್ದಾಗ ನಡೆದ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದ್ದನು. ಈ ಅಪಘಾತದಲ್ಲಿ ಓರ್ವ ಅಪ್ರಾಪ್ತ ಬಾಲಕ ಮೃತಪಟ್ಟಿದ್ದನು.
ಆತ್ಮಹತ್ಯೆಗೂ ಮುನ್ನ ಸೌರಭ್ ಬರೆದಿರುವ ಪತ್ರದ ಪ್ರಕಾರ, ಈ ಮುಂಚೆ ಎರಡು ಸಣ್ಣ ಅಪಘಾತಕ್ಕೆ ಒಳಗಾಗಿದ್ದು, ಈ ಎಲ್ಲಾ ಘಟನೆಗಳು ಆತನ ಮನಸಿನ ಮೇಲೆ ಗಂಭೀರ ಪರಿಣಾಮ ಬೀರಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತೆಹ್ಸಿಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.