ಚೆನ್ನೈ: ಶಬರಿಮಲೆ ದೇಗುಲ ಪ್ರವೇಶಿಸುವ ವಯಸ್ಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯದಲ್ಲಿ ಯಾರೊಬ್ಬರು ಹಸ್ತಕ್ಷೇಪ ಮಾಡಬಾರದೆಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಅನಾದಿಕಾಲದಿಂದಲೂ ನಮ್ಮ ಸಮಾಜದಲ್ಲಿ ಆಚರಣೆಗಳು ನಡೆದುಕೊಂಡು ಬಂದಿದ್ದು, ಅವುಗಳನ್ನು ಗಂಭೀರವಾಗಿ ತೆಗೆದುಕೊಂಡು ಪಾಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಸುಪ್ರೀಂಕೋರ್ಟ್ ಗೆ ಗೌರವ ನೀಡುವುದಾಗಿ ಹೇಳಿದ ರಜನಿಕಾಂತ್, ಆಚರಣೆಗಳು ಪವಿತ್ರವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಯ್ಯಪ್ಪ ದರ್ಶನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ನಂತರ ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಿಳೆಯರು ಸೇರಿದಂತೆ ಬುಧವಾರ ಸಂಜೆ 5 ಗಂಟೆಯಿಂದ ಶಬರಿಮಲೆ ಬಾಗಿಲು ತೆರೆಯಲಾಗಿದೆ. ಆದರೆ, 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಪ್ರತಿಭಟನಾಕಾರರು ಅವಕಾಶ ನೀಡಲೇ ಇಲ್ಲ.
ಇದೇ ವೇಳೆ ತಮ್ಮ ಹೊಸ ರಾಜಕೀಯ ಪಕ್ಷ ಕುರಿತು ಮಾತನಾಡಿದ ರಜನಿಕಾಂತ್. ಶೇ. 90 ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಆದರೆ, ಡಿಸೆಂಬರ್ 12ರ ತಮ್ಮ ಹುಟ್ಟುಹಬ್ಬ ಅಂಗವಾಗಿ ಪಕ್ಷದ ಧ್ವಜ ಅಥವಾ ಹೆಸರಿನ ಬಗ್ಗೆ ಯಾವುದೇ ಔಪಾಚಾರಿಕ ಘೋಷಣೆ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Advertisement