ಸರ್ದಾರ್ ವಲ್ಲಭ ಭಾಯ್ ಪಟೇಲ್‌ ರ 'ಏಕತಾ ಪ್ರತಿಮೆ' ಬಗ್ಗೆ ನಿಮಗೆಷ್ಟು ಗೊತ್ತು?

ಏಕತೆಯ ಮಂತ್ರದ ಮೂಲಕ ಒಗ್ಗೂಡಿಸಿ ಭಾರತಕ್ಕೆ ಸುಂದರ ಸ್ವರೂಪ ನೀಡಿದ ದೇಶದ ಮೊದಲ ಉಪಪ್ರಧಾನಿ, ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರ ಸಾಧನೆಯನ್ನು ಬಿಂಬಿಸುವ ಏಕತಾ ಪ್ರತಿಮೆ ಇಂದು ಲೋಕಾರ್ಪಣೆಯಾಗುತ್ತಿದ್ದು, ಈ ಯೋಜನೆ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅಹಮದಾಬಾದ್: ಸದೃಢ ಭಾರತ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿಟ್ಟ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಏಕತೆಯ ಮಂತ್ರದ ಮೂಲಕ ಒಗ್ಗೂಡಿಸಿ ಭಾರತಕ್ಕೆ ಸುಂದರ ಸ್ವರೂಪ ನೀಡಿದ ದೇಶದ ಮೊದಲ ಉಪಪ್ರಧಾನಿ, ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರ ಸಾಧನೆಯನ್ನು ಬಿಂಬಿಸುವ ಏಕತಾ ಪ್ರತಿಮೆ ಇಂದು ಲೋಕಾರ್ಪಣೆಯಾಗುತ್ತಿದ್ದು, ಈ ಯೋಜನೆ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.
ಸರ್ದಾರ್ ವಲ್ಲಭ ಭಾಯ್ ಪಟೇಲರು ಜನಿಸಿದ ನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ‘ಉಕ್ಕಿನ ಮನುಷ್ಯ’ನ ಜನ್ಮದಿನದಂದೇ ಅವರ ಪ್ರತಿಮೆ ಅನಾವರಣಗೊಳಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಡೀ ಯೋಜನೆಯ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಇಲ್ಲಿ ನೀಡಲಾಗಿದೆ.
2010ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಪ್ರಧಾನಿಯಾಗಿದ್ದಾಗ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. 2013ರಲ್ಲಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ 2014ರಲ್ಲಿ ಈ ಪ್ರತಿಷ್ಟಿತ ಯೋಜನೆಯ ಹೊಣೆಯನ್ನು ಎಲ್ ಅಂಡ್ ಟಿ ಸಂಸ್ಥೆಗೆ ನೀಡಲಾಯಿತು. ಯೋಜನೆ ಕೈಗೆತ್ತಿಕೊಂಡಿದ್ದ ಎಲ್ ಅಂಡ್ ಟಿ ಸಂಸ್ಥೆ 2015ರಲ್ಲಿ ಸಂಸ್ಥೆ ತನ್ನ ಸಮೀಕ್ಷೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಿತು. 2017ರಲ್ಲಿ ಪ್ರತಿಮೆಯ ಪ್ರಾಥಮಿಕ ಕಾಮಗಾರಿ ಆರಂಭವಾಯಿತು. 2018 ಅಕ್ಟೋಬರ್ 31 ಅಂದರೆ ಇಂದು ಪ್ರತಿಮೆ ಅನಾವರಣಗೊಳ್ಳುತ್ತಿದೆ.
ಇನ್ನು ಈ ಪ್ರತಿಮೆ ಹಲವು ವಿಶೇಷತೆಗಳಿಂದ ಕೂಡಿದ್ದು, ಪ್ರತಿಮೆಗಾಗಿ 1850 ಟನ್ ಕಂಚು ಬಳಕೆ ಮಾಡಲಾಗಿದೆ. ಅಂತೆಯೇ 24,200 ಟನ್ ಉಕ್ಕು ಬಳಕೆ ಮಾಡಲಾಗಿದ್ದು. ಸ್ಮಾರಕ ನಿರ್ಮಾಣಕ್ಕಾಗಿ 22,500 ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಈ ಯೋಜನೆಗಾಗಿ ಸರ್ಕಾರ ಒಟ್ಟು 2989 ಕೋಟಿ ರೂ. ವ್ಯಯಿಸಿದೆ. ಈ ಸ್ಮಾರಕ ನಿರ್ಮಾಣಕ್ಕಾಗಿ ಸರಿ ಸುಮಾರು 3 ಸಾವಿರ ಕಾರ್ವಿುಕರು, 300 ಇಂಜಿನಿಯರ್​ಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಇನ್ನು15 ವರ್ಷ ನಿರ್ವಹಣೆಗಾಗಿ ಎಲ್ ಆಂಡ್ ಟಿ ಕಂಪನಿ 657 ಕೋಟಿ ರೂ. ಮೀಸಲಿರಿಸಿದ್ದು, ಗುಜರಾತ್ ನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟೆಯ ಸಾಧು ಬೇಟ್ ನಡುಗಡ್ಡೆಯಲ್ಲಿ ಪ್ರತಿಮೆ ನಿರ್ಮಾಣವಾಗಿದೆ. ಇಡೀ ಪ್ರತಿಮೆ ಒಟ್ಟು 182 ಮೀಟರ್ ಎತ್ತರದಿಂದ ಕೂಡಿದೆ. 
ವಿಹಂಗಮ ನೋಟ
ಸರ್ದಾರ್ ಸರೋವರವನ್ನು 400 ಅಡಿ ಎತ್ತರದಲ್ಲಿ ನಿಂತುಕೊಂಡು ಕಣ್ತುಂಬಿಕೊಳ್ಳುವ ಅವಕಾಶ. ಏಳು ಕಿ.ಮೀ. ದೂರದಿಂದಲೇ ಬರಿಗಣ್ಣಿಗೆ ಗೋಚರಿಸುವ ಪುತ್ಥಳಿ.
ಉದ್ಘಾಟನೆ
ಗಣರಾಜ್ಯೋತ್ಸವ ಮಾದರಿಯಲ್ಲಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ ಬುಧವಾರ ಬೆಳಗ್ಗೆ 11.30ಕ್ಕೆ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಪ್ರಸ್ತುತ ಸಾರ್ವಜನಿಕರಿಗೆ ಪ್ರವೇಶವಿಲ್ಲವಾದರೂ, ಸಾರ್ವಜನಿಕರಿಗೆ ನವೆಂಬರ್ 3ರಿಂದ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸ್ಮಾರಕ ಪ್ರವೇಶಕ್ಕೆ ಪ್ರವೇಶ ಶುಲ್ಕ ವಿಧಿಸಲಾಗಿದ್ದು, ವಯಸ್ಕರಿಗೆ ಪ್ರವೇಶ ಶುಲ್ಕ 120 ರೂ., ಮಕ್ಕಳಿಗೆ (15 ವರ್ಷದೊಳಗಿನ) 60 ರೂ.. ಪನೋರಮಿಕ್ ವೀಕ್ಷಣೆಗೆ 350 ರೂ. ಟಿಕೆಟ್ ಶುಲ್ಕ ವಿಧಿಸಲಾಗಿದೆ. ಇನ್ನುಸ್ಮಾರಕ  ದಿನಕ್ಕೆ 3 ಸಾವಿರ ಪ್ರವಾಸಿಗರ ಧಾರಣಾ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಸುಮಾರು 800 ಕಾರುಗಳಿಗೆ ಪಾರ್ಕಿಂಗ್​ ಸ್ಥಳಾವಕಾಶ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com