ಗುಟ್ಕಾ ಹಗರಣ: ಆಹಾರ, ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ ನಾಲ್ವರ ಬಂಧನ

ತಮಿಳುನಾಡಿನ ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಜಯಂ ಇಂಡಸ್ಟ್ರೀಸ್ ನಿರ್ದೇಶಕರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡಿನ ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಜಯಂ ಇಂಡಸ್ಟ್ರೀಸ್ ನಿರ್ದೇಶಕರು ಮತ್ತು ಮಾಲೀಕರು, ಆಹಾರ ಸುರಕ್ಷತೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜಯಂ ಇಂಡಸ್ಟ್ರೀಸ್ ಮಾಲೀಕ ಮತ್ತು ನಿರ್ದೇಶಕರಾದ ಎವಿ ಮಾಧವ್ ರಾವ್ ಹಾಗೂ ಉಮಾ ಶಂಕರ್ ಗುಪ್ತಾ ಅವರನ್ನು ಬಂಧಿಸಿರುವುದಾಗಿ ಸಿಬಿಐ ಹೇಳಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪಿ. ಸೆಂಥಿಲ್ ಮುರುಗನ್ ಹಾಗೂ  ಕೇಂದ್ರ ಅಬಕಾರಿ ಇಲಾಖೆಯ ಅಧೀಕ್ಷಕ ಎನ್ ಕೆ ಪಾಂಡಿಯನ್ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕಳೆದ ಬುಧವಾರ ಸಿಬಿಐ ಅಧಿಕಾರಿಗಳು  ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಪುದುಚೇರಿ ಸೇರಿದಂತೆ 37 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಈ ಪೈಕಿ ತಮಿಳುನಾಡು ಆರೋಗ್ಯ ಸಚಿವ ವಿಜಯ್ ಭಾಸ್ಕರ್, ಚೆನ್ನೈ ಪೊಲೀಸ್ ಆಯುಕ್ತರು ಮತ್ತು ಇತರೆ ಸ್ಥಳೀಯ ರಾಜಕೀಯ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲಿಸಿದ್ದರು.
ಈ ಹಿಂದೆ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ತಂಬಾಕು, ಗುಟ್ಕಾ ಪದಾರ್ಥಗಳ ಮೇಲೆ ನಿಷೇಧ ಹೇರಿತ್ತು. ಆದರೆ ನಿಷೇಧದ ಹೊರತಾಗಿಯೂ ತಮಿಳುನಾಡಿನಲ್ಲಿ ಗುಟ್ಕಾ ಮತ್ತು ತಂಬಾಕು ವ್ಯಾಪಾರ ಎಗ್ಗಿಲ್ಲದೇ ಸಾಗಿತ್ತು. ಈ ಸಂಬಂಧ ತಮಿಳುನಾಡು ಆರೋಗ್ಯ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ವ್ಯಾಪಾರಿಗಳಿಂದ ಸುಮಾರು 40 ಕೋಟಿ ರೂ. ಕಿಕ್ ಬ್ಯಾಕ್ ಪಡೆದು ಅನಧಿಕೃತವಾಗಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮದ್ರಾಸ್ ಹೈಕೋರ್ಟ್ ನಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಕಳೆದ ಏಪ್ರಿಲ್ ಸಿಬಿಐ ತನಿಖೆಗೆ ಆದೇಶಿಸಿತ್ತು. ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ತಮಿಳುನಾಡಿನ ಖ್ಯಾತ ತಂಬಾಕು ಉದ್ಯಮಿ ಮಾಧವ ರಾವ್ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಧಿಕಾರಿಗಳಿಗೆ ಡೈರಿಯೊಂದು ಲಭಿಸಿತ್ತು. ಈ ಡೈರಿಯಲ್ಲಿರುವ ಮಾಹಿತಿಯನ್ನಾಧರಿಸಿ ಇಂದು ಸಿಬಿಐ ಅಧಿಕಾರಿಗಳು ಮತ್ತೆ 40 ಕಡೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com