ಜೈಪುರ: ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಪಕ್ಷಗಳು ಸೋಮವಾರ ಭಾರತ್ ಬಂದ್ ಆಚರಿಸಿದರೆ, ರಾಜಸ್ಥಾನ ಸಚಿವರು ಮಾತ್ರ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದರೆ ಜನ ತಮ್ಮ ಖರ್ಚುಗಳನ್ನು ಕಡಿಮೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತೈಲ ಬೆಲೆ ಏರಿಕೆಯಾದರೆ ಖರ್ಚು ಕಡಿಮೆ ಮಾಡಬೇಕು ಎಂಬುದು ಜನತೆಗೆ ಅರ್ಥವಾಗುತ್ತಿಲ್ಲ ಎಂದು ರಾಜಸ್ಥಾನ ಸಚಿವ ರಾಜಕುಮಾರ್ ರಿನ್ವಾ ಅವರು ಹೇಳಿದ್ದಾರೆ.
ಜನ ತಮ್ಮ ಖರ್ಚುಗಳನ್ನು ಕಡಿಮೆ ಮಾಡಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕಡಿಮೆ ಬಳಸಿದರೆ ತೈಲದರ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ರಿನ್ವಾ ಹೇಳಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಿನ್ವಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರವ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್, ಬಿಜೆಪಿ ನಾಯಕತ್ವ ಎಷ್ಟು ಕೊಬ್ಬಿದೆ ಎಂಬುದಕ್ಕೆ ರಿನ್ವಾ ಹೇಳಿಕೆಯೇ ಸಾಕ್ಷಿ. ಅವರ ಹೇಳಿಕೆ ಸೊಕ್ಕಿನ ಮತ್ತು ಸೂಕ್ಷ್ಮತೆ ಇಲ್ಲದ್ದು ಎಂದು ಕಿಡಿಕಾರಿದ್ದಾರೆ.