ಜಮ್ಮು-ಕಾಶ್ಮೀರದಲ್ಲಿ ಎನ್'ಕೌಂಟರ್; ಜೈಷ್-ಇ-ಮೊಹಮ್ಮದ್ ಕಮಾಂಡರ್ ಸೇರಿ 3 ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿದ್ದು, ಈ ವೇಳೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಕಮಾಂಡರ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿದ್ದು, ಈ ವೇಳೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಕಮಾಂಡರ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಅದ್ನಾನ್ ಎಂಬಾತನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ನಲ್ಲಿರುವ ಅರಿಪಾಲ್ ಎಂಬ ಪ್ರದೇಶದಲ್ಲಿ ನಿನ್ನೆಯಷ್ಟೇ ಭದ್ರತಾಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಬಳಿಕ ಎನ್ ಕೌಂಟರ್ ನಡೆಸಿದ್ದ ಭದ್ರತಾ ಪಡೆಗಳು ಉಗ್ರ ಸಂಘಟನೆಯ ಕಮಾಂಡರ್ ಅದ್ನಾನ್ ಎಂಬಾತನನ್ನು ಹತ್ಯೆ ಮಾಡಿದೆ.
ಉಗ್ರರು ಅಗಿ ಕುಳಿತಿದ್ದ ಮನೆಯನ್ನು ಭದ್ರತಾ ಪಡೆಗಳು ನಾಶಪಡಿಸಿದೆ. ಭದ್ರತಾ ಪಡೆಗಳು ಸ್ಫೋಟಕ ವಸ್ತು ಬಳಸಿ ಮನೆಯನ್ನು ಸ್ಫೋಟಿಸಿ ಉಗ್ರರನ್ನು ಹತ್ಯೆ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಎನ್'ಕೌಂಟರ್ ವೇಳೆ ಭದ್ರತಾ ಪಡೆಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಎನ್ ಕೌಂಟರ್ ವೇಳೆ ಮಂಜೂರ್ ಅಹ್ಮದ್ ದಾರ್ ಎಂಬ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಕುಪ್ವಾರ ಜಿಲ್ಲೆಯ ತಂಗ್ಧಾರ್ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದೊಳಗೆ ನುಸುಳಲು ಯತ್ನ ನಡೆಸುತ್ತಿದ್ದ ವೇಳೆ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.