ದಿ ಎಂಡ್..?; ತಿಹಾರ್ ಜೈಲಿಗೆ ನಿರ್ಭಯಾ ಆರೋಪಿಗಳ ರವಾನೆ, 10 ನೇಣು ಹಗ್ಗಗಳಿಗೆ ಆರ್ಡರ್!
ನವದೆಹಲಿ: ಪಶು ವೈದ್ಯೆ ದಿಶಾ ಹತ್ಯಾಚಾರ ಆರೋಪಿಗಳ ಎನ್ಕೌಂಟರ್ ಬೆನ್ನಲ್ಲೇ ಇತ್ತ ತಿಹಾರ್ ಜೈಲಿನಲ್ಲಿ ಅತ್ಯಾಚಾರಿಗಳಿಗೆ ನೇಣು ಕುಣಿಕೆ ತಯಾರಿಸುತ್ತಿರುವ ಸುದ್ದಿ ಹೊರಬಿದ್ದಿದೆ.
ಹೌದು.. ಹೈದರಾಬಾದ್ ನ ಪಶು ವೈದ್ಯೆ ದಿಶಾ ಹತ್ಯಾಚಾರ ಆರೋಪಿಗಳ ಎನ್ಕೌಂಟರ್ ಬೆನ್ನಲ್ಲೇ ಇತ್ತ ದೆಹಲಿಯ ನಿರ್ಭಯಾ ಅಪರಾಧಿಗಳನ್ನು ಕೂಡಲೇ ಗಲ್ಲಿಗೇರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೀಗ ಅದಕ್ಕೆ ಇಂಬು ನೀಡುವಂತೆ ಅತ್ತ ತಿಹಾರ್ ಜೈಲಿನಲ್ಲಿ ಅಧಿಕಾರಿಗಳು ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ತಿಹಾರ್ ಜೈಲಿನ ಮೂಲಗಳ ಪ್ರಕಾರ ಜೈಲು ಆಡಳಿತಾಧಿಕಾರಿಗಳು ಈಗಾಗಲೇ 10 ನೇಣು ಹಗ್ಗಳನ್ನು ತಯಾರಿಸಲು ಆರ್ಡರ್ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ನೇಣು ಹಗ್ಗಗಳು ಜೈಲು ಅಧಿಕಾರಿಗಳ ಕೈ ಸೇರಿದೆ. ಇದರ ಬೆನ್ನಲ್ಲೇ ಅತ್ತ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ಕು ಅಪರಾಧಿಗಳನ್ನು ಕೂಡ ಜೈಲಿಗೆ ವಾಪಸ್ ಕರೆತರಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜೈಲು ವರಿಷ್ಠಾಧಿಕಾರಿ ಸಂದೀಪ್ ಗೋಯಲ್ ಅವರು, ಮಂಡೋಲಿ ಜೈಲಿನಲ್ಲಿದ್ದ ನಿರ್ಭಯಾ ಪ್ರಕರಣ ಅಪರಾಧಿ ಪವನ್ ಕುಮಾರ್ ಗುಪ್ತಾನನ್ನು ಜೈಲಿಗೆ ಕರೆತರಲಾಗಿದ್ದು, ತಿಹಾರ್ ಜೈಲಿನ 2ನೇ ಬ್ಲಾಕ್ ನಲ್ಲಿ ಇರಿಸಲಾಗಿದೆ. ಪ್ರಕರಣದ ಉಳಿದ ಇಬ್ಬರು ಅಪರಾಧಿಗಳಾದ ಮುಖೇಶ್ ಸಿಂಗ್ ಮತ್ತು ಅಕ್ಷಯ್ ಅದೇ ಬ್ಲಾಕ್ ಬೇರೇ ಕೊಠಡಿಯಲ್ಲಿದ್ದಾರೆ ಎನ್ನಲಾಗಿದೆ. ಉಳಿದ ಮತ್ತೋರ್ವ ಅಪರಾಧಿ ವಿನಯ್ ಶರ್ಮಾ 4ನೇ ಜೈಲಿನಲ್ಲಿದ್ದು, ಇತ್ತೀಚೆಗಷ್ಟೇ ಆತನನ್ನು ಬೇರೊಂದು ಜೈಲಿನಿಂದ ಕರೆತರಲಾಗಿತ್ತು ಎಂದು ಹೇಳಿದ್ದಾರೆ.
ಇದೇ ಕಾರಣಕ್ಕೆ ಇನ್ನು ಕೆಲವೇ ದಿನಗಳಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳನ್ನೂ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ