ಮುಂಬೈ: ಜಾಮಿಯಾ ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಬ್ರಿಟೀಷ್ ಆಡಳಿತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡನನ್ನು ನೆನಪಿಸಿತು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಅನ್ನು ಖಂಡಿಸಿದ ಉದ್ಧವ್ ಠಾಕ್ರೆ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೈ ಕೊಂಡ ಕ್ರಮ 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಘಟನೆಯನ್ನು ಮರುಕಳಿಸಿತು. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಏನಾಯಿತೊ ಅದೇ ಘಟನೆ ಜಲಿಯನ್ ವಾಲಬಾಗ್ನಲ್ಲಿ ನಡೆಯಿತು. ವಿದ್ಯಾರ್ಥಿಗಳು ಯುವ ಬಾಂಬ್ ಇದ್ದಂತೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡುತ್ತಿದ್ದೇವೆ. ಈ ರೀತಿಯ ಕ್ರಮಗಳು ಸರಿಯಲ್ಲ ಎಂದರು.
1919ರಲ್ಲಿ ಸಭೆ ಸೇರಿದ್ದ ಜನರ ಗುಂಪಿನ ಮೇಲೆ ಶಸ್ತ್ರಸಜ್ಜಿತ ಬ್ರಿಟಿಷ್ ಜನರಲ್ ಡಯರ್ ಗುಂಪು ದಾಳಿ ನಡೆಸಿತು. ಅದರಂತೆ ಈಗ ಪ್ರತಿಭಟನೆ ಮಾಡುತ್ತಿದ್ದ ಯುವಜನರ ಮೇಲೆ ಪೊಲೀಸರು ಹಲ್ಲೆಗೆ ಮುಂದಾದರು ಎಂದು ಎರಡು ಘಟನೆಯನ್ನು ಹೋಲಿಕೆ ಮಾಡಿದರು. ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ. ಸರ್ಕಾರ ಸಂವಿಧಾನ ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ ಬಳಿಕ ಅವರು ದಾಳಿ ನಡೆಸಿದ್ದಾರೆ. ನಾವು ಸಂವಿಧಾನಕ್ಕಾಗಿ ಹೋರಾಡುತ್ತೇವೆ. ಸರ್ಕಾರದ ವಿರುದ್ಧ ಹೋರಾಡುತ್ತೇವೆ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದರು.
Advertisement