ಅರುಣಾಚಲ ಪ್ರದೇಶದವರಲ್ಲದ ಸುಮಾರು ಆರು ಸಮುದಾಯದವರು ಕಳೆದ ಕೆಲ ವರ್ಷಗಳಿಂದ ನಮ್ಸಾಯ್ ಮತ್ತು ಛಾಂಗ್ಲ್ಯಾಂಗ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಪರಿಶಿಷ್ಟ ಪಂಗಡ(Schedule Tribe) ಸ್ಥಾನಮಾನ ನೀಡಲು ಸರ್ಕಾರದ ಜಂಟಿ ಉನ್ನತ ಸಮಿತಿ ಶುಕ್ರವಾರ ಶಿಫಾರಸು ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ಸಮಿತಿಯ ಶಿಫಾರಸನ್ನು ವಿರೋಧಿಸುತ್ತಿವೆ. ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ, ಸ್ಥಳೀಯ ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಇಟ್ಟಿದ್ದಾರೆ.