ತಿರುವನಂತಪುರ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿದೆ ಎಂದು ತಿರುವನಂತಪುರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುವಾಗ ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದು ಸದ್ಯದ ಕುತೂಹಲ.
ಕಾಂಗ್ರೆಸ್ ನಿಂದ ಮಾತ್ರ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಆದರೂ ಕೂಡ ಮೋದಿಯವರನ್ನು ಅಧಿಕಾರದಿಂದ ದೂರವಿಡುವ ಪ್ರಚಾರದಲ್ಲಿ ಕಾಂಗ್ರೆಸ್ ಪ್ರಮುಖ ಶಕ್ತಿಯಾಗಿದೆ. ಹೀಗಾಗಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬೇರೆ ಪಕ್ಷಗಳೊಂದಿಗೆ ಕೈಜೋಡಿಸಲು ಮುಂದಾಗಿದೆ ಎಂದು ನಿನ್ನೆ ಆಂಟನಿಯವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಹೇಳಿದ್ದರು.
ಮೋದಿಯವರ ಜೊತೆ ಹೋರಾಡಲು ರಾಹುಲ್ ಗಾಂಧಿಯವರು ಪ್ರಮುಖ ನಾಯಕರಾಗಿ ಬೆಳೆದಿದ್ದು ಇಂದು ಅವರ ಎದುರು ಧೈರ್ಯದಿಂದ ಹೋರಾಡಲು ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಮೋದಿಯವರಿಗೆ ರಾಹುಲ್ ಕಂಡರೆ ಭಯವಾಗುತ್ತಿದೆ ಎಂದರು.
ಮುಂದಿನ ಲೋಕಸಭೆ ಚುನಾವಣೆಯನ್ನು ಕುರುಕ್ಷೇತ್ರ ಯುದ್ಧ ಎಂದು ಬಣ್ಣಿಸಿದ ಎ ಕೆ ಆಂಟನಿ ದೇಶವನ್ನು ಕಾಪಾಡಲು ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದರು.
ಚುನಾವಣೆ ಸಮೀಪಿಸುತ್ತಿರುವಾಗ ಕೊನೆ ಹಂತದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಕಾಂಗ್ರೆಸ್ ಬಿಡಬೇಕು. ಅಭ್ಯರ್ಥಿಗಳ ಆಯ್ಕೆ ಜಿಲ್ಲಾ ಸಮಿತಿಯಿಂದ ನಿರ್ಧಾರವಾಗಬೇಕು. ಕೆಲ ನಾಯಕರು ತೀರ್ಮಾನಿಸುವ ಬದಲು ಅಭ್ಯರ್ಥಿಗಳ ಆಯ್ಕೆಯು ಪ್ರಜಾಸತ್ತಾತ್ಮಕವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
Advertisement