ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಬಂಧನ ಕ್ರೆಡಿಟ್ ಅನ್ನು ಪ್ರಧಾನಿ ಮೋದಿಗೆ ಕೊಡಲು ನಿರಾಕರಿಸಿದ್ದು, ಅದರ ಕ್ರೆಡಿಟ್ ಲಂಡನ್ ಪತ್ರಕರ್ತನಿಗೆ ಸಲ್ಲಬೇಕು ಎಂದಿದ್ದಾರೆ.
ಚುನಾವಣೆ ಸಂದರ್ಭದಲ್ಲೇ ನೀರವ್ ಮೋದಿ ಬಂಧನವಾಗಿದೆ. ಇದು ಪೂರ್ವ ನಿರ್ಧರಿತ ಮತ್ತು ಇದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನೀರವ್ ಬಂಧನ ಮೊದಲೇ ನಿರ್ಧಾರವಾಗುತ್ತೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಜತೆಗೆ 7 ಹಂತದ ಮತದಾನದ ಮಧ್ಯೆಯೇ ಬಿಜೆಪಿ ಇಂತಹುದೇ ಕೆಲವು ಸ್ಫೋಟಕ ಸುದ್ದಿಗಳು ಬಹಿರಂಗಗೊಳಿಸಲು ನಿರ್ಧರಿಸಿದೆ ಎಂದು ಮಮತಾ ಹೇಳಿದ್ದಾರೆ.
ಲಂಡನ್ನಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿಯನ್ನು ಹುಡುಕಿದ್ದು, ಓರ್ವ ಪತ್ರಕರ್ತ. ಇಷ್ಟು ದಿನ ಸರ್ಕಾರದ ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿದ್ದವು ಎಂದು ಮಮತಾ ಪ್ರಶ್ನಿಸಿದ್ದಾರೆ.
ನಿನ್ನೆಯಷ್ಟೇ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿಯನ್ನು ಯುಕೆ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು 29ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.