ಇದುವರೆಗೆ ಮೋದಿ ಸಂಪುಟದಲ್ಲಿ ಮೊದಲ ರಕ್ಷಣಾ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಹೊಣೆಗಾರಿಕೆ ನೀಡಲಾಗಿದೆ. ಜೊತೆಗೆ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಹೊಣೆಯನ್ನೂ ನೀಡಲಾಗಿದೆ. ಪ್ರಹ್ಲಾದ್ ಜೋಷಿ ಅವರಿಗೆ ಈ ಹಿಂದೆ ಅನಂತ್ಕುಮಾರ್ ಅವರು ನಿರ್ವಹಣೆ ಮಾಡುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆ ವಹಿಸಿಕೊಡಲಾಗಿದೆ. ಜೊತೆಗೆ ಗಣಿ ಮತ್ತು ಕಲ್ಲಿದ್ದಲು ಖಾತೆಯ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೃಹ ಖಾತೆ ಹೊಣೆಗಾರಿಕೆ ನೀಡಲಾಗಿದೆ. ಈ ಹಿಂದೆ ಅವರು ಗುಜರಾತ್ ನಲ್ಲಿ ಅವರು ಇದೇ ಖಾತೆಯ ಹೊಣೆಗಾರಿಕೆಯನ್ನು ನಿರ್ವಹಣೆ ಮಾಡಿದ್ದರು. ರಾಜ್ನಾಥ್ ಸಿಂಗ್ ಅವರಿಗೆ ರಕ್ಷಣಾ ಸಚಿವರ ಜವಾಬ್ದಾರಿ ನೀಡಲಾಗಿದೆ. ರವಿಶಂಕರ್ ಪ್ರಸಾದ್ ಅವರಿಗೆ ಕಾನೂನು, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ವಹಿಸಲಾಗಿದೆ.