ನಾನು ಜಿಲೇಬಿ ತಿನ್ನುವುದರಿಂದ ಮಾಲಿನ್ಯ ಹೆಚ್ಚಾಗುವುದಾದರೆ, ಅದನ್ನು ಬಿಟ್ಟುಬಿಡುತ್ತೇನೆ: ಗೌತಮ್ ಗಂಭೀರ್
ನವದೆಹಲಿ: ದೆಹಲಿ ಸಂಸದ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಿರುವುದಕ್ಕೆ ಆಮ್ ಆದ್ಮಿ ಪಕ್ಷದ ನಾಯಕರಿಗೆ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿನ ವಾಯುಮಾಲಿನ್ಯ ದಟ್ಟಣೆ ಸಮಸ್ಯೆ ಕುರಿತು ಚರ್ಚಿಸಲು ಇತ್ತೀಚೆಗೆ ನಡೆದ ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಗೌತಮ್ ಗಂಭೀರು ಗೈರಾಗಿದ್ದರು. ಇದಕ್ಕೆ ತಿರುಗೇಟು ನೀಡಿ ಆಮ್ ಆದ್ಮಿ ಪಾರ್ಟಿ ದೆಹಲಿ ನಗರದ ಹಲವು ಕಡೆಗಳಲ್ಲಿ ಮರದ ಮೇಲೆ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಹಚ್ಚಿತ್ತು. ಸಂಸದರು ಇತ್ತೀಚೆಗೆ ಕಾಣಿಸಿಕೊಂಡಿರುವುದು ಇಂದೋರ್ ನಲ್ಲಿ ಜಿಲೇಬಿ ತಿಂದುಕೊಂಡು ಎಂದು ಟೀಕಿಸಿತ್ತು.
ಈ ಕುರಿತು ನಿನ್ನೆ ಸಂಸತ್ತಿನ ಹೊರಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ನಾನು ಜಿಲೇಬಿ ತಿಂದದ್ದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವುದಾದರೆ ಇನ್ನು ಎಂದೆಂದಿಗೂ ಜಿಲೇಬಿ ತಿನ್ನುವುದನ್ನೇ ಬಿಡುತ್ತೇನೆ. ಸಂಸದನಾಗಿ ದೆಹಲಿಯಲ್ಲಿ ಕಳೆದ 5 ತಿಂಗಳಲ್ಲಿ ನಾನು ಮಾಡಿದ ಕೆಲಸ ನೋಡಿದರೆ ವಾಯುಮಾಲಿನ್ಯ ಬಗ್ಗೆ ನನಗೆ ಎಷ್ಟು ಕಾಳಜಿಯಿದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.
ನಗರಾಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಯ ಸಂಸದರಲ್ಲಿ ಗೌತಮ್ ಗಂಭೀರ್ ಮಾತ್ರ ಇದ್ದು ಇವರು ಕಳೆದ ಶುಕ್ರವಾರ ನಡೆದ ಮಹತ್ವದ ಸಭೆಗೆ ಹಾಜರಾಗಿರಲಿಲ್ಲ.ಅವರ ಗೈರು ಆಮ್ ಆದ್ಮಿ ಪಾರ್ಟಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ