ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ನಡುವಿನ ಚುನಾವಣೆ ನಂತರದ ಮೈತ್ರಿ ವಿರೋಧಿಸಿ ಮಹಾರಾಷ್ಟ್ರದ ನಿವಾಸಿ ಸುರೇಂದ್ರ ಇಂದ್ರ ಬಹದ್ದೂರ್ ಸಿಂಗ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಂದಿನ ವಾರ ಸುಪ್ರೀಂಕೋರ್ಟ್ ನಲ್ಲಿ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ ಹಾಗೂ ಶಿವಸೇನೆ ಮೈತ್ರಿಗೆ ಸ್ಪಷ್ಟ ಜನಾದೇಶ ನೀಡಲಾಗಿದೆ. ಅದನ್ನು ಇದೀಗ ಬದಲಾಯಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್, ಸೇನಾ ಹಾಗೂ ಎನ್ ಸಿಪಿಯನ್ನು ಆಹ್ವಾನಿಸದಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಲಾಗಿದೆ.
ಒಂದು ವೇಳೆ ಸರ್ಕಾರ ರಚನೆಯಾದರೆ ಅದು ಜನಾದೇಶಕ್ಕೆ ವಿರುದ್ಧವಾಗಿ ರಚನೆಯಾದ ಸರ್ಕಾರವಾಗಿರುತ್ತದೆ. ಅದ್ದರಿಂದ ಅಂತಹ ಸರ್ಕಾರ ರಚನೆಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಿ ಸರ್ಕಾರವನ್ನು ಅಮಾನತುಪಡಿಸಬೇಕೆಂದು ಸುಪ್ರೀಂಕೋರ್ಟ್ ನ್ನು ಅವರು ಕೋರಿದ್ದಾರೆ.
ಇದಕ್ಕೂ ಮುನ್ನ ಔರಂಗಬಾದಿನ ವಕೀಲರೊಬ್ಬರು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ಚುನಾವಣೆ ನಂತರ ಬಿಜೆಪಿ ಜೊತೆಗಿನ ಮೈತ್ರಿ ತೊರೆದು ಜನಾದೇಶಕ್ಕೆ ದ್ರೋಹ ಬಗೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Advertisement