ಅಹಮದಾಬಾದ್: ಕೇವಲ ಶೌಚಾಲಯಗಳ ನಿರ್ಮಾಣವಾದರೆ ಸಾಲದು, ಅದರ ನಿಯಮಿತ ಬಳಕೆ ಅಗತ್ಯ ಎಂದು ಪ್ರತಿಪಾದಿಸಿ ಭಾರತವನ್ನು ಬಯಲು ಶೌಚ ಮುಕ್ತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಅಹ್ಮದಾಬಾದ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಗ್ರಾಮೀಣ ಭಾರತ ಹಾಗೂ ಅದರ ಗ್ರಾಮಗಳು ತಮ್ಮ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. 2014 ರಲ್ಲಿ ಈ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದಕ್ಕೆ ಸ್ವಯಂ ಪ್ರೇರಿತವಾಗಿ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಶಕ್ತಿ ಹಾಗೂ ಯಶಸ್ಸಿನ ಮೂಲ ಎಂದು ಹೇಳಿದ್ದಾರೆ.
ಬಯಲು ಶೌಚ ಮುಕ್ತ ಭಾರತವಾಗಲು ಪ್ರೇರಣೆ ನೀಡುವ ಸಬರ್ ಮತಿ ಪ್ರದೇಶ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ. 2014 ರ ಅ.2 ರಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ-ಗ್ರಾಮೀಣ ಯೋಜನೆಯನ್ನು ಉದ್ಘಾಟಿಸಿದ್ದರು. 2019 ರ ಅ.2 ರ ವೇಳೆಗೆ ಗ್ರಾಮೀಣ ಭಾರತವನ್ನು ಬಯಲು ಶೌಚಮುಕ್ತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.
ಈ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಅಭಿನಂದನೆ ತಿಳಿಸಿದ್ದು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜನ ಭಾಗಿತ್ವ ಹಾಗೂ ಸ್ವಯಂಸೇವಕ ಮನಸ್ಥಿತಿ ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಕಾರಣ ಎಂದು ಮೋದಿ ಬಣ್ಣಿಸಿದ್ದಾರೆ.
ಇದೇ ವೇಳೆ 2022 ರ ವೇಳೆಗೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಗೆ ಮುಕ್ತಿ ನೀಡುವುದು ಜಲ್ ಜೀವನ್ ಮಿಷನ್ ಗಳಂತಹ ಸರ್ಕಾರಿ ಯೋಜನೆಗಳು ಯಶಸ್ವಿಯಾಗಲು ಜನಭಾಗಿತ್ವ ಅತ್ಯಂತ ಮುಖ್ಯ ಎಂದು ಮೋದಿ ಹೇಳಿದ್ದು, ಮಹಾತ್ಮಾ ಗಾಂಧಿ ಅವರ ಕನಸುಗಳನ್ನು ನನಸಾಗಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
Advertisement