ಹರಿದ್ವಾರ: ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿಯ ಹತ್ಯೆಯ ನಂತರ ನಾನು ಜೀವ ಬೆದರಿಕೆ ಎದುರಿಸುತ್ತಿದ್ದು, ಸರ್ಕಾರ ಸೂಕ್ತ ಭದ್ರತೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಅವರು ಒತ್ತಾಯಿಸಿದ್ದಾರೆ.
ಇಂದು ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ, ತಿವಾರಿ ಅವರನ್ನು ಜಿಹಾದಿಗಳು ಹತ್ಯೆ ಮಾಡಿದ್ದಾರೆ. ಈಗ ನನಗೂ ಜೀವ ಬೆದರಿಕೆ ಇದೆ. ಹೀಗಾಗಿ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಸರ್ಕಾರಗಳಿಗೆ ಕೇಳಿಕೊಂಡಿದ್ದೇನೆ ಎಂದರು.
ಹಲವು ಸಂದರ್ಭಗಳಲ್ಲಿ ನನಗೆ ಐಎಸ್ಐಎಸ್ ನಿಂದ ಬೆದರಿಕೆ ಕರೆಗಳು ಬಂದಿವೆ. ನಾನು ದೇವರನ್ನು ನಂಬಿದ್ದೇನೆ. ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲ್ಲ. ಆದರೆ ಕಮಲೇಶ್ ತಿವಾರಿ ಹತ್ಯೆಯಿಂದ ಆಘಾತವಾಗಿದೆ ಎಂದರು. ಅಲ್ಲದೆ ಕೆಲವು ದಿನಗಳ ಹಿಂದೆ ಕೆಲವು ಅಪರಿಚಿತರು ನನ್ನ ಆಶ್ರಮಕ್ಕೆ ಬಂದು ನನ್ನ ಬಗ್ಗೆ ವಿಚಾರಿಸಿದ್ದಾರೆ. ಹೀಗಾಗಿ ತಮಗೆ ಸೂಕ್ತ ಭದ್ರತೆ ಅಗತ್ಯ ಇದೆ ಎಂದಿದ್ದಾರೆ.
ಇದೇ ವೇಳೆ, ಕಮಲೇಶ್ ತಿವಾರಿಯ ಭದ್ರತೆಯನ್ನು ಹಿಂಪಡೆದ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಧ್ವಿ ಪ್ರಾಚಿ ಆಗ್ರಹಿಸಿದ್ದಾರೆ.
Advertisement