ನವದೆಹಲಿ: ನೋಟ್ ರದ್ದತಿ ವೇಳೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಇನ್ನೂ ಐದು ದಿನಗಳ ಕಾಲ ತಮ್ಮ ವಶದಲ್ಲಿರಿಸಿಕೊಳ್ಳಲು ಇಡಿ ಮನವಿ ಮಾಡುವ ಸಾಧ್ಯತೆ ಇದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಈಗೇನಾದರೂ ಆದಲ್ಲಿ ಪಿ. ಚಿದಂಬರಂ ಜೊತೆಗೆ ಡಿಕೆ ಶಿವಕುಮಾರ್ ಕೂಡಾ ತಿಹಾರ್ ಜೈಲು ಸೇರಲಿದ್ದಾರೆ.
ಮತ್ತೊದೆಡೆ ಡಿಕೆ ಶಿವಕುಮಾರ್ ಪರ ವಕೀಲರು ಪಿಎಎಲ್ ಎ ವಿಶೇಷ ಕೋರ್ಟ್ ಗೆ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಕೂಡಾ ಇಂದೇ ನಡೆಯಲಿದೆ. ಕೋರ್ಟ್ ನೀಡುವ ಅಂತಿಮ ತೀರ್ಪಿನಿಂದ ಡಿಕೆ ಶಿವಕುಮಾರ್ ಅವರಿಗೆ ಜೈಲಾ ಅಥವಾ ಬೇಲಾ ಎಂಬುದು ನಿರ್ಧಾರವಾಗಲಿದೆ.
ಈ ಮಧ್ಯೆ ನಿನ್ನೆ ಇಡಿಯಿಂದ ಪುತ್ರಿಯ ವಿಚಾರಣೆಯ ಸುದ್ದಿ ಕೇಳಿ ಮನನೊಂದಿರುವ ಡಿಕೆ ಶಿವಕುಮಾರ್ ಅವರಿಗೆ ರಕ್ತದೊತ್ತಡ ಹಾಗೂ ಡಯೇರಿಯಾ ಹೆಚ್ಚಾಗಿ ರಾಮ್ ಮನಮೋಹನ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದರು.
ಗುರವಾರು ಇಡಿ ಅಧಿಕಾರಿಗಳ ಮುಂದೆ ಸತತವಾಗಿ ವಿಚಾರಣೆಗಾಗಿ ಹಾಜರಾಗಿದ್ದ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ನಂತರ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಈ ಮಧ್ಯೆ ಅವರ ತಂದೆ ಡಿಕೆ ಶಿವಕುಮಾರ್ ಅವರು ಅಸ್ವಸ್ವಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಡಿಕೆ ಶಿವಕುಮಾರ್ ಅವರಿಗೆ ಶೇವಿಂಗ್ ಕಿಟ್ ಒದಗಿಸಲು ಕೋರ್ಟ್ ಅನುಮತಿ ನೀಡಿದ್ದು, ಕೆಲ ದಿನಗಳ ಹಿಂದೆ ಅದನ್ನು ಅವರಿಗೆ ನೀಡಲಾಗಿದೆ ಎಂದು ಶಿವಕುಮಾರ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ
ಬೇನಾಮಿ ಆಸ್ತಿ ಹಾಗೂ ಹವಾಲಾ ಹಣ ವರ್ಗಾವಣೆ ಸಂಬಂಧ ಐಶ್ವರ್ಯ ಅವರನ್ನು ಇಡಿ ವಿಚಾರಣೆ ನಡೆಸಿದ್ದಾರೆ. 22 ವರ್ಷದ ಐಶ್ವರ್ಯ ಗ್ಲೋಬಲ್ ಕಾಲೇಜ್ ಟ್ರಸ್ಟಿ ಕೂಡಾ ಆಗಿದ್ದಾರೆ, 2017ರಲ್ಲಿ ಕೈಗೊಂಡಿದ್ದ ಬ್ಯೂಸಿನೆಸ್ ಟ್ರಿಪ್ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಕೇಳಲಾದ ಅನೇಕ ಪ್ರಶ್ನೆಗಳಿಗೆ ಐಶ್ವರ್ಯ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
2017ರಲ್ಲಿ ಡಿಕೆ ಶಿವಕುಮಾರ್ ಅವರ ದೆಹಲಿ ಹಾಗೂ ಕರ್ನಾಟಕದಲ್ಲಿ ಸೇರಿದ ಮನೆಗಳಲ್ಲಿ 8.6 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿತ್ತು. ಆದರೆ, ಆ ದುಡ್ಡು ನನ್ನದಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.
Advertisement