ಹೈದರಾಬಾದ್ ಎನ್ ಕೌಂಟರ್: ಕಾನೂನು ತನ್ನ ಕರ್ತವ್ಯ ಮಾಡಿದೆ ಎಂದ ಸಜ್ಜನರ್

ಪಶುವೈದ್ಯೆ ಮೇಲೆ ಹತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಸಾಯಿಸಿದ್ದು ತಮ್ಮ ಸ್ವ ರಕ್ಷಣೆಗಾಗಿ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ ಸಿ ಸಜ್ಜನವರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ ಸಿ ಸಜ್ಜನವರ್

ಹೈದರಾಬಾದ್; ಪಶುವೈದ್ಯೆ ಮೇಲೆ ಹತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಸಾಯಿಸಿದ್ದು ತಮ್ಮ ಸ್ವ ರಕ್ಷಣೆಗಾಗಿ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ತಿಳಿಸಿದ್ದಾರೆ.

ನಮ್ಮ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆದರೆ ನಾವು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ನಾವು ಗುಂಡು ಹಾರಿಸಲೇಬೇಕಾಗುತ್ತದೆ. ಆರೋಪಿಗಳು ನಮ್ಮ ಮೇಲೆ ದಾಳಿ ಮಾಡಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ್ದರು ಎಂದು ಇಂದು ಸಜ್ಜನರ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಇಂದು ಮದ್ಯರಾತ್ರಿ 2 ಗಂಟೆ ಸುಮಾರಿಗೆ ಪ್ರಕರಣ ನಡೆದ ಟೊಂಡುಪಳ್ಳಿ ಟೋಲ್ ಗೇಟ್ ಹತ್ತಿರ ಪೊಲೀಸರ ಬೆಂಗಾವಲು ಪಡೆಯೊಂದಿಗೆ ವಾಹನದಲ್ಲಿ ಕರೆದುಕೊಂಡು ಹೋಗಲಾಗಿತ್ತು. ಆರೋಪಿಗಳನ್ನು ವಿಚಾರಣೆ ನಡೆಸಿ ನಂತರ ಪಶುವೈದ್ಯೆಯನ್ನು ಬೆಂಕಿಯಲ್ಲಿ ಸುಟ್ಟಿದ್ದ ಚಟಂಪಳ್ಳಿ ಸುರಂಗದ ಹತ್ತಿರ ಕರೆದುಕೊಂಡು ಹೋಗಲಾಯಿತು. 

‘ಆರೋಪಿಗಳನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಾಗ ಅವರು ಕಲ್ಲುಗಳಿಂದ ಪೊಲೀಸರಿಗೆ ಹೊಡೆದಿದ್ದು, ಪೊಲೀಸರ ಬಳಿ ಇದ್ದ ಪಿಸ್ತೂಲು ಕಸಿದುಕೊಂಡು ಗುಂಡು ಹಾರಿಸಿದ್ದಾರೆ. ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೆ ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಈ ಹಂತದಲ್ಲಿ ಸ್ವ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು. ದಾಳಿಯಲ್ಲಿ ನಾಲ್ವರು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ವಿ ಸಿ ಸಜ್ಜನರ್ ವಿವರಿಸಿದರು.

ಎನ್ ಕೌಂಟರ್ ಬಗ್ಗೆ ಪೊಲೀಸ್ ಆಯುಕ್ತ  ವಿ ಸಿ ಸಜ್ಜನರ್ ವಿವರಿಸಿದ್ದು ಹೀಗೆ: ಆರೋಪಿಗಳನ್ನು ಬಂಧಿಸಿ ಪೊಲೀಸ್ ಕಸ್ಟಡಿಗೊಪ್ಪಿಸಿದ ನಂತರ ಮೊನ್ನೆ ಡಿಸೆಂಬರ್ 4 ಮತ್ತು 5ರಂದು ನಾವು ವಿಚಾರಣೆ ನಡೆಸಿದೆವು. 

ಇಂದು ನಸುಕಿನ ಜಾವ ಅಪರಾಧ ನಡೆದ ಸ್ಥಳಕ್ಕೆ ನಾಲ್ವರು ಆರೋಪಿಗಳನ್ನು ಕರೆದುಕೊಂಡು ಬಂದೆವು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಕೋಲಿನಿಂದ ದಾಳಿ ನಡೆಸಲು ಆರಂಭಿಸಿ ನಮ್ಮ ಬಂದೂಕು ಕಸಿದುಕೊಳ್ಳಲು ಯತ್ನಿಸಿ ಗುಂಡು ಹಾರಿಸಲು ನೋಡಿದರು,

ಆಗ ಪೊಲೀಸರು ಆರೋಪಿಗಳಿಗೆ ಎಚ್ಚರಿಕೆ ನೀಡಿ ಶರಣಾಗುವಂತೆ ಹೇಳಿದರು. ಆದರೆ ಅವರು ಕೇಳದೆ ಗುಂಡು ಹಾರಿಸುವುದನ್ನು ಮುಂದುವರಿಸಿದರು. ಆಗ ನಾವು ಗುಂಡು ಹಾರಿಸಿ ಕೊಂದೆವು. ಎನ್ ಕೌಂಟರ್ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಆರೋಪಿಗಳಿಂದ ನಾವು ಎರಡು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪ್ರಾಥಮಿಕ ಶವಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಎನ್ ಕೌಂಟರ್ ನಡೆದ ಸಂದರ್ಭದಲ್ಲಿ ಆರೋಪಿಗಳ ಜೊತೆ ಸುಮಾರು 10 ಜನ ಪೊಲೀಸರಿದ್ದರು. ಅತ್ಯಾಚಾರ ಕೊಲೆ ನಡೆದ ಸ್ಥಳದಲ್ಲಿ ನಮಗೆ ಪಶುವೈದ್ಯೆಯ ಮೊಬೈಲ್ ಸಿಕ್ಕಿದೆ.

ಇಲ್ಲಿ ಕಾನೂನು ತನ್ನ ಕೆಲಸ ಮಾಡಿದೆ ಎಂದಷ್ಟೇ ನಾನು ಹೇಳುತ್ತೇನೆ ಎಂದ ವಿ ಸಿ ಸಜ್ಜನರ್.

ಇಂದಿನ ಎನ್ ಕೌಂಟರ್ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಜ್ಜನರ್, ಯಾರೆಲ್ಲಾ ಘಟನೆ ಬಗ್ಗೆ ವರದಿ ಕೇಳುತ್ತಾರೆಯೋ ಅವರಿಗೆ ನಾವು ಉತ್ತರ ಕೊಡಲು ಸಿದ್ದ. ಆರೋಪಿಗಳು ಕರ್ನಾಟಕದಲ್ಲಿ ಈ ಹಿಂದೆ ಹಲವು ಕೇಸುಗಳಲ್ಲಿ ಭಾಗಿಯಾಗಿದ್ದರು ಎಂದು ನಮಗೆ ಶಂಕೆಯಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com