ಶಬರಿಮಲೆಯ ಬೃಹತ್ ಆಲದ ಮರಕ್ಕೆ ಬೆಂಕಿ, ಅಪಶಕುನದ ಮುನ್ಸೂಚನೆಯೇ? ವಿಡಿಯೋ ವೈರಲ್

ವಿಶ್ವವಿಖ್ಯಾತ ಶಬರಿಮಲೆಗೆ ಮಹಿಳೆಯರ ಪ್ರವೇಶದ ಬೆನ್ನಲ್ಲೇ ಸನ್ನಿಧಾನಂ ಆವರಣದಲ್ಲಿರುವ ಬೃಹತ್ ಆಲದ ಮರಕ್ಕೆ ಬೆಂಕಿ ಹತ್ತಿದ್ದು ಇದು ಅಪಶಕುನದ ಸಂಕೇತ ಎಂದು ಹೇಳಲಾಗುತ್ತಿದೆ.
ಸನ್ನಿಧಾನಂ ನಲ್ಲಿರುವ ಆಲದ ಮರಕ್ಕೆ ಬೆಂಕಿ
ಸನ್ನಿಧಾನಂ ನಲ್ಲಿರುವ ಆಲದ ಮರಕ್ಕೆ ಬೆಂಕಿ
ಕೊಚ್ಚಿ: ವಿಶ್ವವಿಖ್ಯಾತ ಶಬರಿಮಲೆಗೆ ಮಹಿಳೆಯರ ಪ್ರವೇಶದ ಬೆನ್ನಲ್ಲೇ ಸನ್ನಿಧಾನಂ ಆವರಣದಲ್ಲಿರುವ ಬೃಹತ್ ಆಲದ ಮರಕ್ಕೆ ಬೆಂಕಿ ಹತ್ತಿದ್ದು ಇದು ಅಪಶಕುನದ ಸಂಕೇತ ಎಂದು  ಹೇಳಲಾಗುತ್ತಿದೆ.
ಈ ಕುರಿತು ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಯ್ಯಪ್ಪ ಸ್ವಾಮಿ ದೇಗುಲದ 18 ಮೆಟ್ಟಿಲುಗಳ ಮುಂದೆ ಇರುವ ಅಶ್ವತ್ಥ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ನಂದಿಸುತ್ತಿರುವ ವಿಡಿಯೋ ಇದಾದಿದ್ದು, ಇದು ಅಪಶಕುನದ ಸಂಕೇತ ಎಂದು ಭಕ್ತರು ನಂಬಿದ್ದಾರೆ ಎನ್ನಲಾಗಿದೆ.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದು ವಿವಾದವಾಗಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.. ದೇವರ ನಾಡು ಪ್ರತಿಭಟನೆಯ ಬೀಡಾಗಿ ಪರಿವರ್ತನೆಗೊಂಡಿತ್ತು.. ಇದೀಗ ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನಲ್ಲಿರುವ ಅಶ್ವತ್ಥ ವೃಕ್ಷದಲ್ಲಿ ಕಾಣಿಸಿಕೊಂಡಿ ಆಕಸ್ಮಿಕ ಬೆಂಕಿ ಸುದ್ದಿ ಕೂಡ ವ್ಯಾಪಕ ವೈರಲ್ ಆಗುತ್ತಿದೆ.
ಯಾವುದೀ ಅಶ್ವಥ ಮರ, ಎಲ್ಲಿದ ಈ ಮರ?
ಅಯ್ಯಪ್ಪ ಸನ್ನಿಧಿಗೆ ಭಕ್ತರು ಹೋಗುವಾಗ 18 ಮೆಟ್ಟಲ ಬಳಿಯಲ್ಲೇ ಈ ದೊಡ್ಡ ಅಶ್ವತ್ಥ ಮರವಿದ್ದು, ದರ್ಶನಕ್ಕೆ ಆಗಮಿಸುವ ಭಕ್ತರು ಮೊದಲು ಈ ಮರಕ್ಕೆ ನಮಿಸಿ ನಂತರ ಮುಂದೆ ಸಾಗುತ್ತಾರೆ. ಅಶ್ವತ್ಥ ಮರದ ಪಕ್ಕದಲ್ಲಿ ಅಗ್ನಿ ಕುಂಡವಿದ್ದು, ಇದೇ ಅಗ್ನಿ ಕುಂಡದಲ್ಲಿ ಶತಮಾನಗಳಿಂದ ತುಪ್ಪ ಕಾಯಿಗಳನ್ನು ಭಕ್ತರು ಸಮರ್ಪಿಸುತ್ತಾರೆ.. 
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಕ್ತರೊಬ್ಬರು, ನೂರಾರು ವರ್ಷಗಳಿಂದ ಈ ಮರವಿದೆ. ನಾನೂ ಕೂಡ ದಶಕಗಳಿಂದ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುತ್ತಿದ್ದೇನೆ. ಆದರೆ ಎಂದೂ ಕೂಡ ಯಾವ ಅಪಾಯವೂ ಸಂಭವಿಸಿರಲಿಲ್ಲ.. ಈ ಅಗ್ನಿ ಕುಂಡದ ಮೇಲೆಯೇ ಕೊಂಬೆಗಳು ಚಾಚಿಕೊಂಡಿದ್ದರೂ ಕೂಡ ಎಂದೂ ಕೂಡ ಮರಕ್ಕೆ ಏನೂ ಆಗಿರಲಿಲ್ಲ.. ಇದೇ ಮೊದಲು.. ಅಶ್ವತ್ಥ ಮರಕ್ಕೆ ಬೆಂಕಿ ಹೊತ್ತಿ ಉರಿದಿದೆ.. ಶತಮಾನಗಳಿಂದ ಮಹಿಳೆಯರಿಗೆ ಪ್ರವೇಶ ಇಲ್ಲದ ಸ್ವಾಮಿಯ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ ಕೆಲ ದಿನದಲ್ಲಿಯೇ ಇಂತಹ ಅವಘಡ ನಡೆದಿರುವುದು ಅಪಾಯದ ಮುನ್ಸೂಚನೆ ಇರಬಹುದು ಎಂದು ಹೇಳಿದ್ದಾರೆ.
ಶತಮಾನಗಳಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದ ಅಯ್ಯಪ್ಪ ಸನ್ನಿಧಿಗೆ ಜನವರಿ 1 ರಂದು ಮಹಿಳೆಯರ ಪ್ರವೇಶ ನಡೆದಿತ್ತು. ಇದಕ್ಕೆ ಕೇರಳ ಸರ್ಕಾರ ಸಂಪೂರ್ಣ ಬೆಂಬಲ ನೀಡಿತ್ತು. ಸದ್ಯ ಮರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಪಾಯದ ಮುನ್ಸೂಚನೆಯೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com