ಇಂದು ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜಮ್ಮು-ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ -2019 ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, 'ಈ ಮೀಸಲಾತಿ ಯಾರನ್ನೂ ಕೂಡ ಮೆಚ್ಚಿಸಲು ಅಲ್ಲ. ಬದಲಿಗೆ ನಿರಂತರ ಉಗ್ರರ ದಾಳಿ ಹಾಗೂ ಬಾಂಬ್ ಸ್ಪೋಟಕ್ಕೆ ತತ್ತರಿಸಿ ಹೋಗುತ್ತಿರುವ ಜನ ಮತ್ತು ವಿದ್ಯಾರ್ಥಿಗಳಿಗೆ ಆಶ್ರಯ ನೀಡಲು ಜಾರಿ ಮಾಡಬೇಕಿದೆ. ಇಂತಹ ಮಸೂದೆಯಿಂದ ಕಥುವಾ, ಸಾಂಬಾ ಮತ್ತು ಜಮ್ಮುವಿನಲ್ಲಿ ವಾಸಿಸುವ 3.5 ಲಕ್ಷ ಜನರಿಗೆ ಸಹಾಯವಾಗಲಿದೆ. ಸದ್ಯ ಕಾನೂನಿನ ಪ್ರಕಾರ ರಾಜ್ಯದಲ್ಲಿ ಶೇಕಡಾ 43 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಪೈಕಿ ಶೇ. 3ರಷ್ಟು ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಿಸುವ ಜನರಿಗೆ ಲಭ್ಯವಾಗುತ್ತಿದೆ. ನಾವು ಜಾರಿಗೆ ಮಾಡಲಿರುವ ನೂತನ ಮಸೂದೆ ರಾಜ್ಯದ ಅಂತರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಶೇಕಡಾ 3 ರಷ್ಟು ಮೀಸಲಾತಿ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದರು.