ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಭ್ರಷ್ಟ, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಮರ ಸಾರಿ 600 ಸರಕಾರಿ ನೌಕರರ ವಿರುದ್ದ ಕ್ರಮ ತೆಗೆದುಕೊಂಡಿದ್ದು, 200 ಸಿಬ್ಬಂದಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದ್ದಾರೆ .
ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ವರ್ಗಾವಣೆ ಮತ್ತು ಅವರ ಭವಿಷ್ಯದ ಬಡ್ತಿಗಳನ್ನು ತಡೆಹಿಡಿಯುವ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಅವರು ಕ್ರಮ ಕೈಗೊಂಡ ಅಧಿಕಾರಿಗಳ ಪೈಕಿ ಐಎಎಸ್ ಮತ್ತು ಐಪಿಎಸ್ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದ್ದಾರೆ ಆದರೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
600 ಮಂದಿ ನೌಕರ ವಿರುದ್ದ ಸರಕಾರ ಕ್ರಮ ಕೈಗೊಳ್ಳುತ್ತಿರುವುದು ಇದೆ ಮೊದಲು ಎಂದು ಎಂದು ರಾಜ್ಯ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ. ಕಳೆದ ಜೂನ್ 20 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭ್ರಷ್ಟಾಚಾರ ವಿರುದ್ಧ ಕ್ರಮಕ್ಕೆ ಆದೇಶಿಸಿ ಅವರ ಕಡ್ಡಾಯ ನಿವೃತ್ತಿ ಮಾಡುವುದಾಗಿ ಪ್ರಕಟಿಸಿದ್ದರು.
ಭ್ರಷ್ಟಾಚಾರವನ್ನು ದೊಡ್ಡ ಪ್ರಮಾಣದಲ್ಲಿ ತಡೆಯುವಂತಹ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಜಾರಿಗೊಳಿಸದ ಕಾರಣಕ್ಕಾಗಿ ಅವರು ಅಧಿಕಾರಿಗಳ ವಿರುದ್ಧ ಸಿಡಮಿಡಿಗೊಂಡಿದ್ದರು. ಈ ನಡುವೆ ಯುಪಿ ಸರ್ಕಾರವು 50 ವರ್ಷಕ್ಕಿಂತ ಮೇಲ್ಪಟ್ಟ ಭ್ರಷ್ಟ ಮತ್ತು ಕಾರ್ಯನಿರ್ವಹಿಸದ ಪೊಲೀಸ್ ಅಧಿಕಾರಿಗಳನ್ನು ಬಲವಂತವಾಗಿ ನಿವೃತ್ತಿ ಮಾಡಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಎಲ್ಲ ಪೊಲೀಸ್ ಘಟಕಗಳಿಗೆ ಎಡಿಜಿ (ಸ್ಥಾಪನೆ) ಪಿಯೂಷ್ ಆನಂದ್ ಅವರು ಕಳೆದ ತಿಂಗಳು 30 ರಂದು ಪತ್ರ ಬರೆದು ಕಾರ್ಯನಿರ್ವಹಿಸದ ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದರು.