ಮಾಧ್ಯಮಗಳು ಅಯೋಧ್ಯೆ ಸಂಧಾನ ಪ್ರಕ್ರಿಯೆ ವರದಿ ಮಾಡುವಂತಿಲ್ಲ, ಫೈಜಾಬಾದ್ ನಲ್ಲೇ ಸಂಧಾನ: 'ಸುಪ್ರೀಂ' ಷರತ್ತುಗಳು!

ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನದ ಮೂಲಕವೇ ಸಮಸ್ಯೆ ಇತ್ಯರ್ಥ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸಂಧಾನ ಪ್ರಕ್ರಿಯೆ ಸಂಬಂಧ ಹಲವು ಷರತ್ತುಗಳನ್ನು ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನದ ಮೂಲಕವೇ ಸಮಸ್ಯೆ ಇತ್ಯರ್ಥ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸಂಧಾನ ಪ್ರಕ್ರಿಯೆ ಸಂಬಂಧ ಹಲವು ಷರತ್ತುಗಳನ್ನು ವಿಧಿಸಿದೆ.
ಪ್ರಮುಖವಾಗಿ ಯಾವುದೇ ಕಾರಣಕ್ಕೂ ಸಂಧಾನ ಪ್ರಕ್ರಿಯೆಯನ್ನು ಮಾಧ್ಯಮಗಳು ವರದಿ ಮಾಡಬಾರದು ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು, ಈ ಸಂಬಂಧ ಸಂಧಾನಕಾರರು ಎಚ್ಚರದಿಂದರಿಬೇಕು ಎಂದು ಹೇಳಿದೆ. ಅಲ್ಲದೆ ಸಂಧಾನ ಪ್ರಕ್ರಿಯೆಯ ಎಲ್ಲ ಮಾಹಿತಿಗಳೂ ಗೌಪ್ಯವಾಗಿರಬೇಕಿದ್ದು, ಈ ಕುರಿತು ಸಂಪೂರ್ಣ ಜವಾಬ್ದಾರಿ ಸಂಧಾನ ಸಮಿತಿಯದ್ದೇ ಆಗಿರುತ್ತದೆ ಎಂದೂ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಂವಿಧಾನಿಕ ಪೀಠ ಹೇಳಿದೆ.
ಅಲ್ಲದೆ ಸಂಧಾನ ಸಮಿತಿಗೆ ಸಂಧಾನಕ್ಕಾಗಿ ಪೀಠ 8 ವಾರಗಳ ಕಾಲಾವಕಾಶ ನೀಡಿದ್ದು, ಇಂದಿನಿಂದ ಒಂದು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸಬೇಕು, 4 ವಾರಗಳೊಳಗೆ ಕೋರ್ಟ್ ಸಂಧಾನ ಪ್ರಕ್ರಿಯೆಯ ಪ್ರಗತಿ ವರದಿ ಸಲ್ಲಿಕೆ ಮಾಡಬೇಕು ಮತ್ತು 8 ವಾರಗಳೊಳಗೆ ಇಡೀ ಸಂಧಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದೂ ಪೀಠ ಸಂಧಾನ ಸಮಿತಿಗೆ ಸೂಚಿಸಿದೆ.
ವಿವಾದಿತ ಪ್ರದೇಶ ಫೈಜಾಬಾದ್ ನಲ್ಲೇ ಸಂಧಾನ
ಇನ್ನು ಇಡೀ ಪ್ರಕರಣದ ಕೇಂದ್ರ ಬಿಂದು ಮತ್ತು ವಿವಾದಿತ ಪ್ರದೇಶವಿರುವ ಫೈಜಾಬಾದ್ ನಲ್ಲೇ ಸಂಧಾನ ಪ್ರಕ್ರಿಯೆ ನಡೆಯಬೇಕು ಎಂದೂ ಪೀಠ ಹೇಳಿದ್ದು, ಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ದಾಖಲಿಸಬೇಕು ಎಂದು ಹೇಳಿದೆ.
ಒಟ್ಟಾರೆ ದಶಕಗಳಿಂದಲೂ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಅಯೋಧ್ಯೆ ಭೂವಿವಾದ ಪ್ರಕರಣ ಇದೀಗ ನಿರ್ಣಾಯಕ  ಹಂತ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com