ನವದೆಹಲಿ: ಭಾರತ ಮತ್ತು ಆಫ್ಘಾನಿಸ್ತಾನಗಳ ಮೇಲೆ ದಾಳಿ ಮಾಡುವ ಸಲುವಾಗಿ ಬಾಲಾಕೋಟ್ ಉಗ್ರ ಕ್ಯಾಂಪ್ ನಲ್ಲಿ ಸುಮಾರು 50 ಯುವಕರಿಗೆ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಇದೇ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಷ್–ಎ–ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತದ ವಾಯು ಪಡೆ(ಐಎಎಫ್) ಎಂಟು ತಿಂಗಳ ಹಿಂದೆ ದಾಳಿ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ 45–50 ಮಂದಿ ಉಗ್ರರು ಹಾಗೂ ಆತ್ಮಾಹುತಿ ದಾಳಿಕೋರರು ತರಬೇತಿ ಪಡೆಯುತ್ತಿದ್ದಾರೆ. ಉಗ್ರರ ಶಿಬಿರದಲ್ಲಿ ಸುಮಾರು 45–50 ಮಂದಿ ಆತ್ಮಾಹುತಿ ಬಾಂಬ್ ದಾಳಿಗೆ ತರಬೇತಿ ಪಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಂತೆಯೇ ವರದಿಯಲ್ಲಿ ಭಾರತದ ಗುಪ್ತಚರ ಸಂಸ್ಥೆಗಳು ಉಗ್ರರ ಶಿಬಿರದ ಮೇಲೆ ನಿರಂತರ ನಿಗಾವಹಿಸಿದ್ದು, ತಾಂತ್ರಿಕ ಕಣ್ಗಾವಲಿನ ಮೂಲಕ ಪ್ರತಿ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಬಾಲಾಕೋಟ್ ಶಿಬಿರದಲ್ಲಿ ತರಬೇತಿ ಪಡೆದಿರುವ ಉಗ್ರರ ಪೈಕಿ ಕೆಲವರನ್ನು ಕಾಶ್ಮೀರಕ್ಕೂ ಕಳುಹಿಸಲಾಗಿದ್ದು, ಅಲ್ಲಿ ಭಾರತೀಯ ಭದ್ರತಾ ನೆಲೆಗಳ ಮೇಲೆ ದಾಳಿ ನಡೆಸಲು ಪ್ರೇರೇಪಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಹಿಂದೆ ಫೆಬ್ರುವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯಿಂದ 40 ಮಂದಿ ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಫೆಬ್ರುವರಿ 26ರಂದು ಪಾಕಿಸ್ತಾನ ವಾಯು ಪ್ರದೇಶದ ಒಳಗೆ ಸಾಗಿ ಬಾಲಾಕೋಟ್ನ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಬಳಿಕ ಸುಮಾರು ಆರು ತಿಂಗಳ ವರೆಗೂ ಆ ಶಿಬಿರ ಸ್ಥಗಿತಗೊಂಡಿತ್ತು.
ಇದೀಗ ಮತ್ತೆ ಉಗ್ರ ಕ್ಯಾಂಪ್ ಗಳು ಪುನಾರಂಭಗೊಂಡಿವೆ.
Advertisement