ನವದೆಹಲಿ: ಪಾಕಿಸ್ತಾನ ರಾಜಸ್ತಾನ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.
ಇದರ ಜೊತೆಗೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು, ಆಶಾಂತಿ ವಾತವರಣ ನಿರ್ಮಾಣ ಮಾಡಲು ಇಸ್ಲಾಮಾಬಾದ್ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂದೂ ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ಹಿಂತೆಗೆದುಕೊಂಡ ಕೇಂದ್ರದ ಕ್ರಮಕ್ಕೆ ಪ್ರತೀಕಾರವಾಗಿ ಸೇಡು ತೀರಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಸಿಯಾಲ್ಕೋಟ್-ಜಮ್ಮು ಮತ್ತು ರಾಜಸ್ತಾನ ಗಡಿಯಲ್ಲಿ ಪಾಕಿಸ್ತಾನ ದೊಡ್ಡ ಮಟ್ಟದ ದಾಳಿ ಮಾಡಲು ಸೈನಿಕರನ್ನು ನಿಯೋಜಿಸಲು ಹೊರಟಿದೆ ಎಂದು ಮಾಧ್ಯಮ ವರದಿ ಎಚ್ಚರಿಸಿದೆ.
ಪಾಕಿಸ್ತಾನದ ಸೇನೆಯಿಂದ ಅಪಾಯ ತಪ್ಪಿಸಲು ಗಡಿ ಭದ್ರತಾ ಪಡೆ ಮತ್ತು ಜಮ್ಮು ಮತ್ತು ರಾಜಸ್ಥಾನ ವಲಯಗಳಲ್ಲಿನ ಸೇನಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ ಎಂದೂ ಹೇಳಲಾಗಿದೆ .
ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕ್ರಮದ ನಂತರ ನವದೆಹಲಿಯೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಭಾರತ ಪಾಕ್ ನಡುವೆ ಯುದ್ದವಾದರೆ ಅದಕ್ಕೆ ವಿಶ್ವಸಮುದಾಯ ಹೊಣೆಯಾಗಬೇಕಾಗುತ್ತದೆ ಎಂದೂ ಪಾಕ್ ಪ್ರಧಾನಿ ಎಚ್ಚರಿಸಿದ್ದಾರೆ.
ಇದರ ಜೊತೆಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜಾವೇದ್ ಬಜ್ವಾ, ನಾವು ಪರಿಸ್ಥಿತಿ ಎದುರಿಸಲು ಯಾವ ಮಟ್ಟಕ್ಕೆ ಹೋಗಲು ಸಿದ್ದ ಎಂದು ಸವಾಲು ಹಾಕಿದ್ದರು.
Advertisement