ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವ ಮಧ್ಯೆಯೇ ಕಣಿವೆ ರಾಜ್ಯಕ್ಕೆ ಮತ್ತೆ ಉಗ್ರರ ದಾಳಿ ಭೀತಿ ಉಂಟಾಗಿದೆ.
ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು 25 ಉಗ್ರರು ಗುಪ್ತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಅಂಗಡಿ ಮುಂಗಟ್ಟು ತೆರೆಯದಂತೆ ವರ್ತಕರಿಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಶೋಪಿಯಾನ್ ನಲ್ಲಿ ಬಾಗಿಲು ತೆರೆದಿದ್ದ ಆಟೋ ಮೊಬೈಲ್ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಮತ್ತೊಂದೆಡೆ ಸಿಸಿಟಿವಿಗಳನ್ನು ಬಂದ್ ಮಾಡುವಂತೆ ಕೆಲ ವರ್ತಕರು ಮತ್ತು ಮಾಧ್ಯಮ ಕಚೇರಿಗಳಿಗೆ ಉಗ್ರರು ಸೂಚನೆಗಳನ್ನು ರವಾನಿಸಿದ್ದಾರೆ. ಇದು ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿಗೆ ಸಂಚು ರೂಪಿಸಿರುವ ಅನುಮಾನವನ್ನು ಭದ್ರತಾ ಪಡೆಗಳಲ್ಲಿ ಹುಟ್ಟುಹಾಕಿದೆ.
ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ. ಶ್ರೀನಗರದಲ್ಲಿ ಉಗ್ರರು ನುಸುಳಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ರಾಜ್ ಭಾಗ್, ಜವಾಹರ್ ನಗರ, ಲಾಲ್ ಚೌಕ್ ನಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಅಡಗಿರುವ ಉಗ್ರರ ಪತ್ತಚೆಗೆ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement