ಕೊಯಮತ್ತೂರು: ಮದ್ಯ ಸಿಗದೆ ಹತಾಶೆ, ಹ್ಯಾಂಡ್ ಸ್ಯಾನಿಟೈಸರ್ ಕುಡಿದು ಯುವಕ ಸಾವು
ಕೊಯಮತ್ತೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಹ್ಯಾಂಡ್ ಸ್ಯಾನಿಟೈಸರ್ ಕುಡಿದು 35 ವರ್ಷದ ಗ್ಯಾಸ್ ಸಿಲೆಂಡರ್ ಪೂರೈಸುತ್ತಿದ್ದ ಯುವಕನೋರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಇಂದು ನಡೆದಿದೆ.
ಮೃತನನ್ನು ಸುಲೂರ್ ಬಳಿಯ ಕರೈಯರೈಪ್ಪ ದೇವರ್ ಬೀದಿಯ ಇ. ಬರ್ನಾಡ್ ಎಂದು ಗುರುತಿಸಲಾಗಿದೆ. ಮದ್ಯ ಸಿಗದೆ ಹ್ಯಾಂಡ್ ಸ್ಯಾನಿಟೈಸರ್ ಕುಡಿದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಈತನನ್ನು ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಹ್ಯಾಂಡ್ ಸ್ಯಾನಿಟೈಸರ್ ಕುಡಿದಿರುವುದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. ಕುಡಿತದ ದಾಸನಾಗಿದ್ದ ಬರ್ನಾಡ್ ಲಾಕ್ ಡೌನ್ ನಿಂದ ಮದ್ಯ ಸಿಗದೆ ಸಾಕಷ್ಟು ಹತಾಸೆಗೊಂಡಿದ್ದ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಸ್ಯಾನಿಟೈಸರ್ ನಲ್ಲಿ ಅಲ್ಕೊಹಾಲ್ ಅಂಶವಿರುತ್ತದೆ ಅಲ್ಲದೇ, ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೂ ನೆರವಾಗಲಿದೆ ಎಂಬುದನ್ನು ತಿಳಿದು ಆತ ಸ್ಯಾನಿಟೈಸರ್ ಕುಡಿದಿರುವುದಾಗಿ ಕೆಲವರು ಹೇಳಿದ್ದಾರೆ.
ಯುವಕನ ಮೃತದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಸುಲೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ