ಕೊರೋನಾ ವೈರಸ್ ಲಾಕ್ ಡೌನ್: ಐದು ತಿಂಗಳ ನಂತರ ಭಕ್ತರಿಗೆ ವೈಷ್ಣೋದೇವಿ ದರ್ಶನ

ಕೊರೋನಾ ವೈರಸ್ ಸಾಂಕ್ರಾಮಿಕದ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾತಾ ವೈಷ್ಣೋದೇವಿ ದೇಗುಲವನ್ನು ಐದು ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರಿಗಾಗಿ ತೆರೆಯಲಾಗಿದೆ.
ವೈಷ್ಣೋದೇವಿ ದೇಗುಲ
ವೈಷ್ಣೋದೇವಿ ದೇಗುಲ

ಕಾಟ್ರಾ: ಕೊರೋನಾ ವೈರಸ್ ಸಾಂಕ್ರಾಮಿಕದ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾತಾ ವೈಷ್ಣೋದೇವಿ ದೇಗುಲವನ್ನು ಐದು ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರಿಗಾಗಿ ತೆರೆಯಲಾಗಿದೆ.

ಹೌದು.. ಜಮ್ಮುವಿನ ಕಾಟ್ರಾದಲ್ಲಿರುವ ತ್ರಿಕುಟಾ ಬೆಟ್ಟದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ದೇಗುಲ ಭೇಟಿಗೆ ಸರ್ಕಾರ ಅನುಮತಿ ನೀಡಿದ್ದು, ಭಕ್ತರ ದರ್ಶನಕ್ಕಾಗಿ ವೈಷ್ಣೋದೇವಿ ದೇಗುಲವನ್ನುಇಂದಿನಿಂದ ತೆರೆಯಲಾಗಿದೆ. ಜಮ್ಮುವಿನ ಖುಷ್ವಿಂದರ್ ಸಿಂಗ್ ಅವರ ನೇತೃತ್ವದ 12 ಸದಸ್ಯರ ತಂಡ ಭಾನುವಾರ ಮುಂಜಾನೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.

ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮೊದಲ ತಂಡದಲ್ಲಿ ಖುಷ್ವಿಂದರ್ ಸಿಂಗ್ ಮತ್ತು ಸದಸ್ಯರು ಇದ್ದರು. ಜಮ್ಮುವಿನಿಂದ ಹೊರಟ ಖುಷ್ವಿಂದರ್ ತಂಡ, ಮುಂಜಾನೆ ನಾಲ್ಕು ಗಂಟೆಗೆ ಕಾಟ್ರಾದಲ್ಲಿರುವ ದೇಗುಲಕ್ಕೆ ಭೇಟಿ ನೀಡುವ ಯಾತ್ರಿಕರ ಶಿಬಿರವನ್ನು ತಲುಪಿತು. ಬೆಳಿಗ್ಗೆ 6 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಅವರು ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ, ಎಲ್ಲ ರೀತಿಯ ಕ್ರಮಗಳನ್ನು ಕೊನೆಯವರೆಗೂ ಪರಿಶೀಲಿಸಿ, ನಂತರ ಯಾತ್ರಾರ್ಥಿಗಳನ್ನು ದರ್ಶನಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಖುಷ್ವಿಂದರ್ ಸಿಂಗ್ ಅವರು,  ‘ನಾನು ಪ್ರತಿ ತಿಂಗಳು ಒಮ್ಮೆಯಾದರೂ ಪ್ರಾರ್ಥನೆ ಸಲ್ಲಿಸಲು ಈ ದೇಗುಲಕ್ಕೆ ಬರುತ್ತಿದ್ದೆ. ಕೋವಿಡ್‌ನಿಂದಾಗಿ ದೇವಾಲಯವನ್ನು ಮುಚ್ಚಲಾಗಿತ್ತು. ಈಗ ದೇಗುಲ ತೆರೆಯಲು ಅನುಮತಿ ಕೊಟ್ಟ ಮೊದಲ ದಿನವೇ ದೇವರ ದರ್ಶನಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಕೋವಿಡ್‌ 19 ಸೋಂಕಿನ ಕಾರಣದಿಂದ ಐದು ತಿಂಗಳಿನಿಂದ ವೈಷ್ಣೋದೇವಿ ದೇವಾಲಯ ಕೇಂದ್ರವನ್ನು ಮಾರ್ಚ್‌ 18 ರಂದು ಮುಚ್ಚಲಾಗಿತ್ತು. ಭಾನುವಾರದಿಂದ ದೇಗುಲ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿತ್ತು. ನಿತ್ಯ ದೇವರ ದರ್ಶನಕ್ಕೆ 2 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com