ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ಗುಣಮುಖ ಹೊಂದುತ್ತಿರುವವರ ಸಂಖ್ಯೆ ಕೂಡ ಶೇಕಡಾ 90ಕ್ಕಿಂತ ಹೆಚ್ಚಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲು ಇಂದು ಕೇಜ್ರಿವಾಲ್ ಸಭೆ ಕರೆದಿದ್ದರು ಅದರಲ್ಲಿ ಸಚಿವರುಗಳು ಮತ್ತು ಇತರ ಕೆಲವು ಅಧಿಕಾರಿಗಳು ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಸಲು ಆದೇಶ ನೀಡುವಂತೆ ಮತ್ತು ಕಾನೂನು ಪಾಲನೆಯಾಗುತ್ತಿದೆಯೇ ಎಂದು ನೋಡಿಕೊಳ್ಳುವಂತೆ ಕೇಜ್ರಿವಾಲ್ ಆದೇಶ ಹೊರಡಿಸಿದರು.
ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಗಳನ್ನು ಧರಿಸಬೇಕು, ಜನರ ಅತಿಯಾದ ಆತ್ಮವಿಶ್ವಾಸದಿಂದ ಹಲವರು ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ, ಇದರಿಂದ ವೈರಸ್ ಜಾಸ್ತಿಯಾಗುತ್ತಿದೆ ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 1,693 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು 14 ಸಾವಿರದ 130 ಬೆಡ್ ಗಳಿವೆ, ಅವುಗಳಲ್ಲಿ 10,448 ಬೆಡ್ ಗಳು ಖಾಲಿಯಿವೆ. ಕೋವಿಡ್ ಪರೀಕ್ಷೆಗಳನ್ನು ಸರ್ಕಾರ ಹೆಚ್ಚಿಸಲಿದೆ. ಮುಂದಿನ ವಾರ 40 ಸಾವಿರ ಪರೀಕ್ಷೆಗಳನ್ನು ಪ್ರತಿದಿನ ನಡೆಸಲಾಗುವುದು ಎಂದರು.
Advertisement