ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಕೇಸಿನಲ್ಲಿ ದೆಹಲಿ ಸರ್ಕಾರ ಮತ್ತು ಬಿಜೆಪಿ ರಾಜಕೀಯದ ಆಟವಾಡಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕೇಸಿನಲ್ಲಿ ದೆಹಲಿ ಸರ್ಕಾರದ ಅಡಿಯಲ್ಲಿ ಬರುವ ಎಲ್ಲಾ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮಾಡಿ ಮುಗಿಸಿದೆ. ನಮ್ಮ ಕಡೆಯಿಂದ ಯಾವುದೂ ವಿಳಂಬವಾಗಿಲ್ಲ. ದೆಹಲಿ ಸರ್ಕಾರದ್ದು ಇದರಲ್ಲಿ ಯಾವ ಪಾತ್ರವೂ ಇಲ್ಲ. ಅಪರಾಧಿಗಳನ್ನು ಆದಷ್ಟು ಬೇಗನೆ ಗಲ್ಲಿಗೇರಿಸಬೇಕೆಂದು ನಮ್ಮ ಬಯಕೆಯಾಗಿದೆ ಎಂದು ಹೇಳಿದ್ದಾರೆ.
ನಿರ್ಭಯಾ ತಾಯಿ ಆಶಾ ದೇವಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಆಪ್ ಮತ್ತು ಬಿಜೆಪಿ ಸರ್ಕಾರ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದು ಜನವರಿ 22ರಂದು ನಿಗದಿಯಾಗಿರುವ ಗಲ್ಲುಶಿಕ್ಷೆ ಪ್ರಕ್ರಿಯೆಯನ್ನು ಬೇಕೆಂದೇ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಘಟನೆ ನಡೆದು 7 ವರ್ಷವಾದರೂ ನಮಗೆ ನ್ಯಾಯ ಸಿಕ್ಕಿಲ್ಲ. ನಮ್ಮ ನೋವು ಸರ್ಕಾರಕ್ಕೆ ಅರ್ಥವಾಗುವುದಿಲ್ಲ. ನಮ್ಮ ಮಗಳ ಸಾವಿನಲ್ಲಿ ಎರಡೂ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಗಲ್ಲುಶಿಕ್ಷೆಯನ್ನು ಬೇಕೆಂದೇ ಮಂದೂಡಲಾಗುತ್ತಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಆರೋಪಿಸಿದ್ದರು.
Advertisement